ADVERTISEMENT

ಮೇ ತಿಂಗಳಾಂತ್ಯದಲ್ಲಿ ಸಾಹಿತ್ಯ ಸಮ್ಮೇಳನ: ಡಾ.ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 14:34 IST
Last Updated 21 ಮಾರ್ಚ್ 2022, 14:34 IST
ಡಾ.ಮಹೇಶ ಜೋಶಿ
ಡಾ.ಮಹೇಶ ಜೋಶಿ   

ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಹಾವೇರಿಯಲ್ಲಿ ಆಯೋಜಿಸಲಾಗುವುದು. ಈ ಸಂಬಂಧ ಶೀಘ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರ್ಚ್‌, ಏಪ್ರಿಲ್‌ನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಿವೆ. ಆದ್ದರಿಂದ ಮೇ ತಿಂಗಳಾಂತ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರ ₹ 20 ಕೋಟಿ ಘೋಷಣೆ ಮಾಡಿದ್ದು, ಅದನ್ನು ಅತ್ಯಂತ ಜವಾಬ್ದಾರಿಯಿಂದ ಖರ್ಚು ಮಾಡಲಾಗುವುದು’ ಎಂದರು.

1 ಕೋಟಿ ಸದಸ್ಯತ್ವ: ‘ಅಧ್ಯಕ್ಷರ ಅವಧಿ ಮುಗಿಯುವುದರೊಳಗಾಗಿ 1 ಕೋಟಿ ಜನರಿಗೆ ಕಸಾಪ ಸದಸ್ಯತ್ವ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಅತ್ಯಾಧುನಿಕ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಮನೆಯಲ್ಲಿ ಕುಳಿತೇ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗುವುದು. ಪರಿಷತ್ ಸದಸ್ಯತ್ವ ಶುಲ್ಕವನ್ನು ₹ 1 ಸಾವಿರದಿಂದ ₹ 250ಕ್ಕೆ ಇಳಿಸಲಾಗುವುದು. ಕಲಾವಿದರು, ರೈತರು, ಕಾರ್ಖಾನೆಯಲ್ಲಿ ಕೆಲಸ ಮಾಡುವವರು, ಆಟೊ ಚಾಲಕರು ಹೀಗೆ ಎಲ್ಲ ಸ್ತರದ ಜನರಿಗೂ ಸದಸ್ಯತ್ವ ನೀಡಲಾಗುವುದು. ಇದಕ್ಕಾಗಿ ಸದಸ್ವತ್ಯ ಅಭಿಯಾನವನ್ನು ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಬಸ್‌ ನೀಡುವಂತೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

ADVERTISEMENT

ಸಂಘರ್ಷಕ್ಕೆ ಸಿದ್ಧ: ‘ಕನ್ನಡ ಭಾಷೆಯ ವಿಚಾರದಲ್ಲಿ ಅಗತ್ಯ ಬಿದ್ದರೆ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯಲೂ ಸಿದ್ಧನಿದ್ದೇನೆ. ರೈಲ್ವೆ, ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಲೀಗಲ್ ನೋಟಿಸ್ ಕಳಿಸಿದ್ದೆ. ಇದೀಗ ಕನ್ನಡದಲ್ಲೇ ಪರೀಕ್ಷೆ ನಡೆಸಲು ಈ ಸಂಸ್ಥೆಗಳು ತೀರ್ಮಾನಿಸಿವೆ’ ಎಂದರು.

ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್‌ ಕಲಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವೇ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳನ್ನು ಆರಂಭಿಸುತ್ತಿದೆ. ಇದು ಸರ್ವಥಾ ಸಮರ್ಥನೀಯವಲ್ಲ. ಈ ಬಗ್ಗೆ ಚರ್ಚಿಸಲು ಕಸಾಪದಲ್ಲಿ ಏಪ್ರಿಲ್ 5ರಂದು ದುಂಡು ಮೇಜಿನ ಸಭೆ ಏರ್ಪಡಿಸಲಾಗಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.