ಬೆಳಗಾವಿ: ‘ಭಾರತೀಯ ಅಂಚೆಇಲಾಖೆಯು ವಿಶ್ವಾಸಾರ್ಹವಾದುದಾಗಿದೆ. ತಂತ್ರಜ್ಞಾನ ಯುಗದಲ್ಲೂ ನಡೆಯುತ್ತಿರುವ ಪತ್ರ ವ್ಯವಹಾರಗಳಿಗೆ ಸಂಪರ್ಕ ಸೇತುವಾಗಿದೆ’ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
ಇಲ್ಲಿನ ರೈಲ್ವೆ ಸಮುದಾಯ ಭವನದಲ್ಲಿ ಅಖಿಲ ಭಾರತ ಆರ್ಎಂಎಸ್, ಎಂಎಂಎಸ್ ನೌಕರರ ಸಂಘದಿಂದ ಭಾನುವಾರದಿಂದ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ 32ನೇ ಜಂಟಿ ಕರ್ನಾಟಕ ವೃತ್ತದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತೀಯ ಅಂಚೆ ಸೇವೆ ಮೊದಲು ಗ್ರಾಮೀಣಗಳ ನಡುವೆ ಸಂಪರ್ಕ ಸೇತುವೆಯಾಗಿತ್ತು. ಅಂಚೆಯಣ್ಣರು ಗ್ರಾಮೀಣ ಪ್ರದೇಶಗಳಿಗೆ ಬಂದರೆ ಜನರು ಬಹಳ ಗೌರವ ಕೊಡುತ್ತಿದ್ದರು. ಏಕೆಂದರೆ, ಅವರು ಪತ್ರ ತಲುಪಿಸುವ ಕಾರ್ಯವನ್ನು ನಿಷ್ಠೆಯಿಂದನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ತಂತ್ರಜ್ಞಾನ, ಮೊಬೈಲ್ ಬಂದ ಬಳಿಕ ಪತ್ರ ವ್ಯವಹಾರ ಕಡಿಮೆಯಾಗಿದೆ. ಸರ್ಕಾರ ಅಂಚೆ ಕಚೇರಿಯಲ್ಲೂ ಬ್ಯಾಂಕ್ಗಳನ್ನು ಸಹ ತೆರೆದಿದೆ’ ಎಂದರು.
‘ಅಂಚೆ ಇಲಾಖೆಯ ನೌಕರರ ಬೇಡಿಕೆಗಳ ಈಡೇರಿಕೆ ಬಗ್ಗೆ ಸಂಸದ ಸುರೇಶ ಅಂಗಡಿ ಅವರ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.
ದೆಹಲಿಯ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಸಿ. ಪಿಳ್ಳೈ ಮಾತನಾಡಿ, ‘ಸರ್ಕಾರದ ಆರ್ಥಿಕ ನೀತಿಯಿಂದ ಅಂಚೆ ಕಚೇರಿ ನೌಕರರ ಮೇಲೆ ಹೊಡೆತ ಬೀಳ್ಳುತ್ತಿದೆ. ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ. ಖಾಲಿ ಇರುವ 1 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಹೊಸ ಪಿಂಚಣಿಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು.ರೈಲ್ವೆ ಮೇಲ್ ಸರ್ವಿಸ್ (ಆರ್ಎಂಎಸ್), ಮೋಟರ್ ಮೇಲ್ ಸರ್ವಿಸ್, ಮೇಲ್ ಗಾರ್ಡ್ (ಎಂಜಿ), ಮಲ್ಟಿ ಟಾಸ್ಕ್ ಸ್ಟಾಫ್ (ಎಂಟಿಎಸ್)ಅಂಚೆ ನೌಕರರಿಗೆ ಭದ್ರತೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ ರೈಲ್ವೆ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವರೀತಿಯಲ್ಲಿ ಅಂಚೆ ನೌಕರರ ಕುಟುಂಬಕ್ಕೂ ನೀಡಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದಹೋರಾಡಬೇಕು’ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಗಿರಿರಾಜಸಿಂಗ, ಪಿ.ಸುರೇಶ, ಸಂಘದ ಕಾರ್ಯದರ್ಶಿ ಎ. ಶ್ರೀನಿವಾಸ್, ಉದಯಶಂಕರ ರಾವ್ ಇದ್ದರು.
ರಾಜ್ಯದ ಹಲವು ಜಿಲ್ಲೆಗಳ ನೌಕರರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.