ADVERTISEMENT

ಅಂಬೇಡ್ಕರ್ ಪ್ರಶಸ್ತಿ | ಆರೋಪ ನ್ಯಾಯಸಮ್ಮತವಲ್ಲ: ಜಿ. ಮನೋಹರ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 16:31 IST
Last Updated 12 ಏಪ್ರಿಲ್ 2025, 16:31 IST
   

ಬೆಂಗಳೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಶಸ್ತಿಗಳನ್ನು ಬಲಗೈ ಸಮುದಾಯದವರಿಗೆ ಮಾತ್ರ ನೀಡಲಾಗಿದ್ದು, ಇದರಲ್ಲಿ ಸಚಿವರು, ಅಧಿಕಾರಿಗಳ ಕೈವಾಡವಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಆರೋಪ ನ್ಯಾಯ‌ಸಮ್ಮತವಲ್ಲ. ಎಡಗೈ– ಬಲಗೈ ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನವಿದು’ ಎಂದು ಛಲವಾದಿ ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಮನೋಹರ್‌ ಹೇಳಿದ್ದಾರೆ.

‘ಅಸ್ಪಶ್ಯ ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸುವ ಅಗತ್ಯವಿದೆ. ಈ ಕಾರಣಕ್ಕೆ ಅಂಬೇಡ್ಕರ್‌ ಪ್ರಶಸ್ತಿಗೆ ಈಗಾಗಲೇ ಆಯ್ಕೆ ಮಾಡಿರುವ 15 ಸಾಧಕರ ಜೊತೆಗೆ, ಪ್ರತಿ ವರ್ಷ ತಲಾ ಎರಡರಂತೆ ‌ಇನ್ನೂ ಆರು ಪ್ರ‌ಶಸ್ತಿಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿ ಈ ಎರಡೂ ಅಸ್ಪಶ್ಯ ಸಮುದಾಯದ ಹಿರಿಯ ಮುಖಂಡರಿಗೆ ಸಮನಾಗಿ ನೀಡಬೇಕು’ ಅವರು ಆಗ್ರಹಿಸಿದ್ದಾರೆ.

‘ರಾಜ್ಯ ಸರ್ಕಾರ ಬಾಬು ಜಗಜೀವನ್ ರಾಂ ಸ್ಮರಣಾರ್ಥ ಏಪ್ರಿಲ್‌ 5ರಂದು 2023, 2024 ಮತ್ತು 2025ನೇ ಸಾಲಿನ 15 ಪ್ರಶಸ್ತಿಗಳನ್ನು ಪ್ರದಾನ ಮಾಡಿತ್ತು. ಆ ಎಲ್ಲ ಪ್ರಶಸ್ತಿಗಳಿಗೆ ಎಡಗೈ ಸಮುದಾಯವರನ್ನು ಆಯ್ಕೆ ಮಾಡಲಾಗಿತ್ತು. ಆ ವೇಳೆಯಲ್ಲಿ ಬಲಗೈ ಸಮುದಾಯವನ್ನು ಕಡೆಗಣಿಸಲಾಗಿದೆ. ‘ಅಂಬೇಡ್ಕರ್‌ ಪ್ರಶಸ್ತಿ’ಗೆ 15 ಸಾಧಕರನ್ನು ಆಯ್ಕೆ ಮಾಡುವ ವೇಳೆಯಲ್ಲಿ ಈ ತಪ್ಪನ್ನು ಸರ್ಕಾರ ಸರಿಪಡಿಸಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.