ಬೆಂಗಳೂರು: ‘ಭದ್ರಾವತಿಯಲ್ಲಿ ಶನಿವಾರ ಆರ್ಎಎಫ್ ಘಟಕ ಸ್ಥಾಪಿಸಲು ಹಾಕಿದ ಅಡಿಗಲ್ಲು ಫಲಕ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರವಿದ್ದು, ಕನ್ನಡವನ್ನು ಕಡೆಗಣಿಸಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ತೆರಳುವ ಮೊದಲು ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಅಮಿತ್ ಶಾಗೆ ಕನ್ನಡ ಬರುತ್ತೇನ್ರಿ’ ಎಂದು ಪ್ರಶ್ನಿಸಿದರು.
‘ಕಾರ್ಯಕ್ರಮ ನಡೆದಿರುವುದು ಕರ್ನಾಟಕದಲ್ಲಿ. ಹೀಗಾಗಿ, ಕನ್ನಡ ಭಾಷಾ ಬಳಕೆ ಇರಲೇಬೇಕಿತ್ತು. ಕನ್ನಡ ಭಾಷೆ ಬಳಸದೇ ಇರುವುದು ಅಪರಾಧ. ರಾಜ್ಯದಲ್ಲಿ ಹಿಂದಿ ಹೇರಿಕೆ ಅಷ್ಟು ಸುಲಭವಲ್ಲ’ ಎಂದೂ ಹೇಳಿದರು.
ಯಡಿಯೂರಪ್ಪ ಸರ್ಕಾರದ ಸಾಧನೆಯನ್ನು ಶಾ ಗುಣಗಾನ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಕೇಂದ್ರದಲ್ಲಿ ಒಳ್ಳೆಯ ಸರ್ಕಾರ ನೀಡಿದ್ದಾರಾ. ಇಷ್ಟೆಲ್ಲ ನಡೆಯುತ್ತಿದ್ದರೂ ಯಡಿಯೂರಪ್ಪ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.