ಹುಬ್ಬಳ್ಳಿ: ರೈತರಿಂದ ಖರೀದಿಸುವ ಉತ್ಪನ್ನಗಳಿಗೆ ವಿಧಿಸುವ ಸೆಸ್ ವಿರೋಧಿಸಿ ಜುಲೈ 27ರಿಂದ ರಾಜ್ಯದಾದ್ಯಂತ ಎಪಿಎಂಸಿಗಳಲ್ಲಿನ ವಹಿವಾಟನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲು ಎಪಿಎಂಸಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಎಪಿಎಂಸಿ ಒಳಗಡೆ ನಡೆಯುವ ಖರೀದಿಗೆ ಮಾತ್ರ ಸೆಸ್ ವಿಧಿಸಲಾಗುತ್ತದೆ. ಹೊರಗಿನ ಖರೀದಿಗೆ ಯಾವುದೇ ಸೆಸ್ ಇಲ್ಲ. ಇದು ವರ್ತಕರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸುತ್ತಿದ್ದು, ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಗೊಂದಲ ನಿವಾರಿಸಬೇಕು ಎಂದು ವಹಿವಾಟು ಬಂದ್ ಮಾಡಲಾಗುತ್ತಿದೆ ಎಂದರು.
ಜುಲೈ 27ರಿಂದ ರೈತರು ಹತ್ತಿ, ಶೇಂಗಾ ಹಾಗೂ ಒಣ ಪದಾರ್ಥ ಉತ್ಪನ್ನಗಳನ್ನು ಎಪಿಎಂಸಿಗೆ ತರಬಾರದು. ಹಣ್ಣು–ತರಕಾರಿಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಹಾವೇರಿ, ಗದಗ, ರಾಣೆಬೆನ್ನೂರು, ಬ್ಯಾಡಗಿ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ಧಾರವಾಡ ಸೇರಿದಂತೆ ರಾಜ್ಯದ 162 ಎಪಿಎಂಸಿಗಳು ಬಂದ್ ಇರಲಿವೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.