ಬೆಂಗಳೂರು: ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಮುಂದೂಡಿರುವ ಆದೇಶವನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ಸೂಚಿಸಿದೆ.
ಆಗ್ನೇಯ ಮತ್ತು ಪಶ್ಚಿಮ ಪದವೀಧರರ ಕ್ಷೇತ್ರಗಳು, ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಅ. 28ರಂದು ಚುನಾವಣೆ ನಡೆದಿತ್ತು. ನವೆಂಬರ್ 2ರಂದು ಮತ ಎಣಿಕೆ ನಿಗದಿಯಾಗಿತ್ತು. ಅದನ್ನು ನ. 10ಕ್ಕೆ ಮುಂದೂಡಿ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದರು.
ಮತ ಎಣಿಕೆ ಮುಂದೂಡಿರುವುದನ್ನು ಪ್ರಶ್ನಿಸಿ ನ್ಯೂಸ್ ಇಂಡಿಯಾ ವೋಟರ್ಸ್ ಫೋರಂ, ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯೋಗಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದೆ. ‘ಮತ ಪೆಟ್ಟಿಗೆಗಳನ್ನು ಇರಿಸಿರುವ ಸ್ಥಳಗಳಲ್ಲಿ ಭದ್ರತೆ ಕೊರತೆ ಇದೆ. ಅಲ್ಲಿಗೆ ಹಲವು ಕಡೆಗಳಿಂದ ಸಂಪರ್ಕ ಸಾಧ್ಯವಿದೆ. ಭದ್ರತೆಯ ಕೊರತೆ ಕಾರಣದಿಂದ ತಕ್ಷಣವೇ ಮತ ಎಣಿಕೆ ಆರಂಭಿಸಿ, ಫಲಿತಾಂಶ ಪ್ರಕಟಿಸಲು ಆದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ಪೀಠ ಮಂಗಳವಾರ ಅರ್ಜಿಯ ವಿಚಾರಣೆ ಆರಂಭಿಸಿತು. ಅರ್ಜಿದಾರರ ಕೋರಿಕೆ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ಸೂಚಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.