ADVERTISEMENT

ಶಾಸಕರಿಗೂ ರಾಷ್ಟ್ರ ಧ್ವಜಾರೋಹಣ ಅವಕಾಶ

ಕೇಂದ್ರ ಗೃಹ ಸಚಿವರಿಗೆ ಚರ್ಚೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 18:48 IST
Last Updated 14 ಡಿಸೆಂಬರ್ 2018, 18:48 IST

ಬೆಳಗಾವಿ: ‘ರಾಷ್ಟ್ರ ಧ್ವಜಾರೋಹಣಕ್ಕೆ ಶಾಸಕರಿಗೂ ಅವಕಾಶ ಕಲ್ಪಿಸುವ ಕುರಿತು ಕೇಂದ್ರ ಗೃಹ ಸಚಿವರ ಜತೆ ಚರ್ಚೆ ನಡೆಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ ಶಾಸಕ ನಾಗನಗೌಡ ವಿಷಯ ಪ್ರಸ್ತಾಪಿಸಿ, ‘ಸ್ವಾತಂತ್ರ್ಯ ದಿನಾಚರಣೆಯ ದಿನ ದೆಹಲಿಯಲ್ಲಿ ಪ್ರಧಾನಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ, ತಾಲ್ಲೂಕು ಕೇಂದ್ರದಲ್ಲಿ ತಹಶೀಲ್ದಾರ್‌ ಈ ಕೆಲಸ ಮಾಡುತ್ತಾರೆ. ಇದು ಸರಿಯಲ್ಲ‘ ಎಂದರು.

***

ADVERTISEMENT

ಪರಿಷತ್ತಿಗೆ ಕೋನರಡ್ಡಿ?

ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ಒಂದು ನಾಮನಿರ್ದೇಶನ ಸದಸ್ಯತ್ವ ಸ್ಥಾನಕ್ಕೆ ಜೆಡಿಎಸ್‌ನ ಎನ್.ಎಚ್. ಕೋನರಡ್ಡಿ ಅವರನ್ನು ನೇಮಕ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.

ಸೋಮವಾರ (ಇದೇ 17) ಈ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವ ಕಳುಹಿಸಲಾಗುತ್ತದೆ. ಅವರು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಅಧಿವೇಶನ ನಡೆಯುತ್ತಿರುವಾಗಲೇ ಕೋನರಡ್ಡಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಪರಿಷತ್ತಿನಲ್ಲಿ ಖಾಲಿ ಇದ್ದ ಮೂರು ಸ್ಥಾನಗಳಲ್ಲಿ ಎರಡನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಯು.ಬಿ. ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್ ಅವರನ್ನು ಈಗಾಗಲೇ ನಾಮನಿರ್ದೇಶನ ಮಾಡಲಾಗಿದೆ. ಖಾಲಿ ಇರುವ ಒಂದು ಸ್ಥಾನ ಜೆಡಿಎಸ್‌ಗೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.