ADVERTISEMENT

ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಿ: ಕೃಷಿ ಸಚಿವ ಬಿ.ಸಿ.ಪಾಟೀಲ ಒತ್ತಾಯ

ಕ್ಯಾಸಿನೊ ತೆರೆದರೆ ತಪ್ಪೇನು?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 7:43 IST
Last Updated 23 ಫೆಬ್ರುವರಿ 2020, 7:43 IST
ಬಿ.ಸಿ. ಪಾಟೀಲ್
ಬಿ.ಸಿ. ಪಾಟೀಲ್   

ಚಿತ್ರದುರ್ಗ: ‘ಭಾರತದ ವಿರುದ್ಧ ಅಥವಾ ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರುವ ಅಗತ್ಯವಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭಾನುವಾರ ಭೇಟಿ ನೀಡಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭಾರತದ ಅನ್ನ ತಿಂದು, ಈ ದೇಶದ ನೀರು ಕುಡಿದು, ಇಲ್ಲಿಯ ಗಾಳಿ ಸೇವಿಸಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರು ಈ ದೇಶದಲ್ಲಿ ಏಕೆ ಇರಬೇಕು? ಇಂತಹವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ’ ಎಂದರು.

ADVERTISEMENT

ರಾಜೀನಾಮೆ ವೈಯಕ್ತಿಕ ಅಭಿಪ್ರಾಯ:‘ಶಾಸಕ ಮಹೇಶ್‌ ಕುಮಠವಳ್ಳಿಗೆ ಸಚಿವ ಸ್ಥಾನ ಕಲ್ಪಿಸದಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂಬ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಕುಮಠವಳ್ಳಿ ಕೂಡ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದಾರೆ. ಅವರಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಕಳಕಳಿ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

‘ಚುನಾವಣೆಯಲ್ಲಿ ಸೋಲು ಕಂಡವರಿಗೆ ಸಚಿವ ಸ್ಥಾನ ಕಲ್ಪಿಸಲು ಕಾನೂನುತೊಡಕು ಎದುರಾಗಿದೆ. ಅನರ್ಹರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂತ್ರಿಗಳಾಗಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಹೀಗಾಗಿ, ಅವರಿಗೆ ಜೂನ್‌, ಜುಲೈನಲ್ಲಿ ಸೂಕ್ತ ಸ್ಥಾನ ಸಿಗಬಹುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಸ್ಮರಿಸಬೇಕು:‘17 ಜನ ಶಾಸಕರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಿಂದ ಹೊರಗೆ ಬಂದಿದ್ದರಿಂದ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದೆ. ಹೀಗಾಗಿ, ಅವರು ನಮ್ಮನ್ನು ಸ್ಮರಿಸಬೇಕು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಾರು, ಬಂಗಲೆ ಇಲ್ಲದೇ ಅವರು ಬೇಸರಗೊಂಡಿದ್ದರು. ಅವರಿಗೆ ನಮ್ಮ ಬಗ್ಗೆ ಪ್ರೀತಿ ಇದೆ. ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾರಣಕ್ಕೆ ನಮ್ಮ ಬಗ್ಗೆ ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಕ್ಯಾಸಿನೊ ತೆರೆದರೆ ತಪ್ಪೇನು?

‘ಕ್ಯಾಸಿನೊ ಸೆಂಟರ್‌ (ಜೂಜು ಕೇಂದ್ರ) ತೆರೆದರೆ ತಪ್ಪೇನು ಇಲ್ಲ. ಭಾರತದ ಹಲವರು ಕ್ಯಾಸಿನೊ ಆಡಲು ಸಿಂಗಪುರ, ಶ್ರೀಲಂಕಾ ಸೇರಿ ಹಲವು ದೇಶಗಳಿಗೆ ಹೋಗುತ್ತಾರೆ. ನಮ್ಮ ದುಡ್ಡು ವಿದೇಶದತ್ತ ಹರಿದರೆ ಭಾರತಕ್ಕೆ ಆರ್ಥಿಕ ಕೊರತೆ ಉಂಟಾಗುತ್ತದೆ. ಇಂತಹ ಕ್ಯಾಸಿನೋವವನ್ನು ನಮ್ಮಲ್ಲೇ ಆರಂಭಿಸಿದರೆ ತಪ್ಪೇನು? ಪ್ರವಾಸೋದ್ಯಮ ಎಂಬುದು ಮಳೆ ಇಲ್ಲದ ಬೆಳೆ ಇದ್ದಂತೆ’ ಎಂದು ಸರ್ಕಾರದ ಕ್ರಮವನ್ನು ಬಿ.ಸಿ.ಪಾಟೀಲ್‌ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.