ADVERTISEMENT

ಬಡವರಿಂದ ದೂರ ಸಾಗುತ್ತಿರುವ ‘ಬಂಧು’?

ಯೋಜನೆ ಮುಂದುವರಿಕೆಯತ್ತ ಸರ್ಕಾರದ ಮೌನ: ಸಹಕಾರಿ ಬ್ಯಾಂಕುಗಳಿಂದ ಸಿಗುತ್ತಿಲ್ಲ ಸಾಲ !

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:44 IST
Last Updated 19 ಸೆಪ್ಟೆಂಬರ್ 2019, 19:44 IST
   

ಬೆಂಗಳೂರು: ಮೀಟರ್‌ ಬಡ್ಡಿ ವಿಷ ವರ್ತುಲದಿಂದಬೀದಿ ಬದಿ ವ್ಯಾಪಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೂಪಿಸಿದ್ದ ‘ಬಡವರ ಬಂಧು’ ಕಿರುಸಾಲ ಯೋಜನೆ ತೆವಳುತ್ತಿದೆ.

ಯೋಜನೆ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದು ಸಹಕಾರಿ ಬ್ಯಾಂಕುಗಳು ಸುಮ್ಮನಾಗಿದ್ದರೆ, ಇಂಥದ್ದೊಂದು ಯೋಜನೆ ಇದೆ ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ ಹಲವು ವ್ಯಾಪಾರಿಗಳು.

ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕುಗಳು, ಮಹಿಳಾ ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಶೂನ್ಯ ಬಡ್ಡಿದರದಲ್ಲಿ ₹2 ಸಾವಿರದಿಂದ ₹10 ಸಾವಿರದವರೆಗೆ ಮೂರು ತಿಂಗಳ ಅವಧಿಗೆ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ.

ADVERTISEMENT

‘ಸರ್ಕಾರ ಬದಲಾವಣೆಯಾದ ಬಳಿಕ ನಮಗೆ ಯಾವುದೇ ಸೂಚನೆ ಬಂದಿಲ್ಲ. ಸದ್ಯಕ್ಕೆ ಯೋಜನೆಯಡಿ ಸಾಲ ವಿತರಿಸುತ್ತಿಲ್ಲ’ ಎಂದು ಹೆಸರು ಬಹಿರಂಗಕ್ಕೆ ಒಪ್ಪದ ಸಹಕಾರಿ ಬ್ಯಾಂಕ್‌ವೊಂದರ ವ್ಯವಸ್ಥಾಪಕ ನಿರ್ದೇಶಕರುಹೇಳುತ್ತಾರೆ.

‘ನಾವು ನೀಡುವ ಸಾಲದ ಮೊತ್ತಕ್ಕೆ ಸರ್ಕಾರವು ಶೇ 10ರಷ್ಟು ಬಡ್ಡಿ ಮತ್ತು ಶೇ 1ರಷ್ಟು ಪ್ರೋತ್ಸಾಹ ಧನ ನೀಡುತ್ತದೆ. ಆದರೆ, ಅಸಲಿನ ಬಗ್ಗೆ ಯಾವುದೇ ಖಾತ್ರಿ ನೀಡುವುದಿಲ್ಲ. ಸುಮ್ಮನೆ ‘ರಿಸ್ಕ್‌’ ಏಕೆ ಎಂದು ಸಾಲ ವಿತರಿಸುತ್ತಿಲ್ಲ’ ಎಂದೂ ಅವರು ಹೇಳಿದರು.

‘ಮೂರು ತಿಂಗಳಿನಿಂದ ಸಾಲ ನೀಡುತ್ತಿಲ್ಲ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಯೋಜನೆಯನ್ನು ಮತ್ತೆ ಜಾರಿಗೊಳಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ’ ಎಂದುಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಇ.ಸಿ. ರಂಗಸ್ವಾಮಿ ಹೇಳಿದರು.

‘ಬ್ಯಾಂಕ್‌ನವರು ಹಲವು ಬಾರಿ ಓಡಾಡಿಸುತ್ತಾರೆ. ದಿನದ ದುಡಿಮೆ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಹಲವರಿಗೆ ಬ್ಯಾಂಕ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಇಂದಿಗೂ ವ್ಯಾಪಾರಿಗಳು ಮೀಟರ್‌ ಬಡ್ಡಿ ದಂಧೆಗೆ ತುತ್ತಾಗುತ್ತಿದ್ದಾರೆ’ ಎಂದು ಫುಟ್‌ಪಾತ್‌ ವ್ಯಾಪಾರಿಗಳ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಸೈಯದ್‌ ಮುಜೀಬ್‌ ಹೇಳಿದರು.

ಸ್ಥಗಿತಕ್ಕೆ ಸೂಚಿಸಿಲ್ಲ: ‘ಯೋಜನೆ ಯಡಿಸಾಲ ನೀಡುವುದನ್ನು ಸ್ಥಗಿತಗೊಳಿಸಿ ಎಂದು ಸರ್ಕಾರ ಯಾರಿಗೂ ಹೇಳಿಲ್ಲ. ಆದ್ಯತೆ ಮೇರೆಗೆ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ’ ಎಂದು ಸಹಕಾರ ಸೊಸೈಟಿಗಳ ಹೆಚ್ಚುವರಿ ರಿಜಿಸ್ಟ್ರಾರ್‌ (ಸಾಲ) ಆರ್. ಶಿವಪ್ರಕಾಶ್‌ ಹೇಳಿದರು.

***

ಯೋಜನೆಯ ಪ್ರಗತಿ ಮತ್ತು ಸಾಧಕ–ಬಾಧಕಗಳ ಕುರಿತು ಸೆ. 27ರಂದು ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಇಲಾಖೆಯ ಉನ್ನತ ಅಧಿಕಾರಿಗಳು, ಬ್ಯಾಂಕ್‌ಗಳ ಎಂ.ಡಿ ಪಾಲ್ಗೊಳ್ಳುವರು
ಆರ್. ಶಿವಪ್ರಕಾಶ್‌, ಸಹಕಾರ ಸೊಸೈಟಿಗಳ ಹೆಚ್ಚುವರಿ ರಿಜಿಸ್ಟ್ರಾರ್‌ (ಸಾಲ)

***

ಯೋಜನೆಯ ಪ್ರಗತಿ ಕುರಿತು ಸೆ. 27ರಂದು ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಉನ್ನತ ಅಧಿಕಾರಿಗಳು, ಬ್ಯಾಂಕ್‌ಗಳ ಎಂ.ಡಿ ಪಾಲ್ಗೊಳ್ಳುವರು

-ಆರ್. ಶಿವಪ್ರಕಾಶ್‌, ಸಹಕಾರ ಸೊಸೈಟಿಗಳ ಹೆಚ್ಚುವರಿ ರಿಜಿಸ್ಟ್ರಾರ್‌ (ಸಾಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.