ADVERTISEMENT

ಪ್ರೊ ಭಗವಾನ್ ಮೇಲೆ ಮಸಿ ಪ್ರಕರಣ: ವಕೀಲೆ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 11:50 IST
Last Updated 5 ಫೆಬ್ರುವರಿ 2021, 11:50 IST
ಪ್ರೊ. ಭಗವಾನ್
ಪ್ರೊ. ಭಗವಾನ್   

ಬೆಂಗಳೂರು: ಪ್ರಕರಣವೊಂದರ ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ವಿಚಾರವಾದಿ ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದಿರುವ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ಒತ್ತಾಯಿಸಿದೆ.

‘ಮೀರಾ ರಾಘವೇಂದ್ರ ಎಂಬ ವಕೀಲೆ ನ್ಯಾಯಾಲಯದ ಆವರಣದಲ್ಲಿ ವಿಚಾರವಾದಿ ಪ್ರೊ ಭಗವಾನ್ ಅವರ ಮುಖಕ್ಕೆ ಮಸಿ ಎರಚಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿಸ್ವಾತಂತ್ರ್ಯವಿದೆ. ಆ ಸ್ವಾತಂತ್ರ್ಯವನ್ನು ಉಲ್ಲಂಘಿಸಿದವರಿಗೆ ದಂಡನೆ ನೀಡಲು ನ್ಯಾಯಾಲಯಗಳಿವೆ. ಮಾನ್ಯ ವಕೀಲೆ ತಾವೇ ಭಗವಾನ್ ಮೇಲೆ ದಾವೆ ಹೂಡಿದ್ದಾರೆ. ಅದೇ ನ್ಯಾಯಾಲಯದ ಆವರಣದಲ್ಲಿ ಸಮವಸ್ತ್ರಧಾರಿಯಾಗಿ ಕಾನೂನನ್ನು ಕೈಗೆತ್ತಿಕೊಂಡಂತೆ ಭಗವಾನ್ ಮೇಲೆ ಹಲ್ಲೆನಡೆಸಿರುವುದು ಅನಾಗರಿಕವೂ ಅಪ್ರಜಾಸತ್ತಾತ್ಮಕವೂ ಅಸಂವಿಧಾನಿಕವೂ ಆದ ಹಿಂಸಾಮಾರ್ಗ. ಈ ವಕೀಲೆ ನ್ಯಾಯಾಲಯದಲ್ಲಿ ವಾದ ಮಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ವಕೀಲರ ಸಂಘವು ಈ ವಕೀಲೆಯು ನ್ಯಾಯಾಲಯದಲ್ಲಿ ವಕಾಲತ್ತು ಮಾಡುವ ಮಾನ್ಯತೆಯನ್ನು ರದ್ದುಗೊಳಿಸಿ ಸಂಘದ ಘನತೆ ಗೌರವವನ್ನು ಉಳಿಸಿಕೊಳ್ಳುವ ಅಗತ್ಯವಿದೆ.ಸರ್ಕಾರವೂ ಈ ವಕೀಲೆಯ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಒತ್ತಾಯಿಸುತ್ತೇವೆ’ ಎಂದು ಬಂಡಾಯ ಸಾಹಿತ್ಯ ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜತೆಗೆ ವಕೀಲೆಯ ವಾದ ಮಂಡನೆಯ ಸನ್ನದನ್ನು ನ್ಯಾಯಾಲಯವು ರದ್ದುಪಡಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.

ಸಂಘಟನೆಯ ಹೇಳಿಕೆಗೆ ಡಾ. ಬಂಜಗೆರೆ ಜಯಪ್ರಕಾಶ್, ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಜಿ ಕೆ ಗೋವಿಂದ ರಾವ್, ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ರುದ್ರಪ್ಪ ಹನಗವಾಡಿ, ಡಾ. ವಸುಂಧರಾ ಭೂಪತಿ. ಕೆ. ಷರೀಫ. ಡಾ. ಕಾಳೇಗೌಡ ನಾಗವಾರ, ಡಾ. ಹಿ. ಶಿ. ರಾಮಚಂದ್ರೇಗೌಡ ಒಪ್ಪಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.