ADVERTISEMENT

ವೀರಪುಲಿಕೇಶಿ ಬ್ಯಾಂಕಿಗೆ ಕನ್ನ

₹2 ಕೋಟಿಗೂ ಹೆಚ್ಚು ಮೌಲ್ಯದ ಆಭರಣ, ₹5.5 ಲಕ್ಷ ನಗದು ಕಳವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 19:09 IST
Last Updated 11 ಜನವರಿ 2019, 19:09 IST
ಕುಳಗೇರಿ ಕ್ರಾಸ್‌ನ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಹಿಂಬದಿಯ ಕಿಟಕಿಯ ಸರಳುಗಳನ್ನು ಕಳ್ಳರು ಗ್ಯಾಸ್‌ ಕಟರ್‌ನಿಂದ ಕತ್ತರಿಸಿರುವುದು
ಕುಳಗೇರಿ ಕ್ರಾಸ್‌ನ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಹಿಂಬದಿಯ ಕಿಟಕಿಯ ಸರಳುಗಳನ್ನು ಕಳ್ಳರು ಗ್ಯಾಸ್‌ ಕಟರ್‌ನಿಂದ ಕತ್ತರಿಸಿರುವುದು   

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ನಲ್ಲಿರುವ, ವೀರಪುಲಿಕೇಶಿ ಸಹಕಾರಿ ಬ್ಯಾಂಕ್‌ನಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದೆ. ₹2ಕೋಟಿಗೂ ಹೆಚ್ಚು ಮೌಲ್ಯದ 12 ಕೆ.ಜಿಯಷ್ಟು ಚಿನ್ನಾಭರಣ ಹಾಗೂ ₹5.5 ಲಕ್ಷ ನಗದನ್ನು ಕಳ್ಳರು ದೋಚಿದ್ದಾರೆ.

ಬ್ಯಾಂಕ್ ಹಿಂಬದಿಯ ಕಿಟಕಿಯ ಸರಳುಗಳನ್ನು ಗ್ಯಾಸ್‌ ಕಟರ್ ಮೂಲಕ ಕತ್ತರಿಸಿ ಒಳಗೆ ನುಗ್ಗಿ, ಸ್ಟ್ರಾಂಗ್‌ ರೂಂನ ಬಾಗಿಲನ್ನು ಕತ್ತರಿಸಿದ್ದಾರೆ.

ಸ್ಟ್ರಾಂಗ್‌ರೂಂಗೆ ಅಳವಡಿಸಿದ್ದ ಸೈರನ್‌ನ ಕೇಬಲ್ ಕತ್ತರಿಸಿ ಸಂಪರ್ಕ ತಪ್ಪಿಸಿದ್ದಾರೆ. ಒಳಗಿನ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂತಿಯನ್ನು ಆಕಾಶದತ್ತ ತಿರುಗಿಸಿದ್ದಾರೆ. ಮಧ್ಯ
ರಾತ್ರಿ 12.30ರ ವೇಳೆ ನಾಲ್ವರು ಮುಸುಕುಧಾರಿಗಳು ಕಿಟಕಿ ಮೂಲಕ ಒಳಗೆ ಪ್ರವೇಶಿಸಿರುವ ದೃಶ್ಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಿಬ್ಬಂದಿ, ಬೆಳಿಗ್ಗೆ ಬ್ಯಾಂಕಿಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಎರಡನೇ ಬಾರಿಗೆ ಯಶಸ್ಸು: 2009ರಲ್ಲಿ ಒಮ್ಮೆ ಕಳ್ಳತನಕ್ಕೆ ಯತ್ನ ನಡೆದಿತ್ತು. ಆಗಲೂ ಕಿಟಕಿ ಸರಳು ಮುರಿದು ಒಳ
ನುಗ್ಗಿದ್ದ ಕಳ್ಳರು ಖಾಲಿ ಕ್ಯಾಶ್‌ಬಾಕ್ಸ್ ಹೊತ್ತೊಯ್ದಿದ್ದರು. ಭದ್ರತಾ ಸಿಬ್ಬಂದಿ, ಮೂರು ದಿನಗಳಿಂದ ರಾತ್ರಿ ಪಾಳಿಗೆ ಬಂದಿರಲಿಲ್ಲ ಎನ್ನಲಾಗಿದೆ.ವೃತ್ತಿಪರ ಕಳ್ಳರ ತಂಡ ಪಾಲ್ಗೊಂಡಿರಬಹುದು ಎಂದು ಪೊಲೀಸರು ಶಂಕಸಿದ್ದಾರೆ.

‘ನಗ–ನಗದು ಸೇರಿದಂತೆ ಬ್ಯಾಂಕ್‌ನಲ್ಲಿ ಇಡಲಾಗಿದ್ದ ಎಲ್ಲ ಸ್ವತ್ತು ವಿಮೆಯ ರಕ್ಷಣೆಗೆ ಒಳಪಟ್ಟಿದೆ. ಹಾಗಾಗಿ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಮಾಜಿ ಶಾಸಕರೂ ಆದ ಬ್ಯಾಂಕಿನ ಅಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.