ADVERTISEMENT

ಪೇಜಾವರ ಶ್ರೀ ಲಿಂಗಾಯತ ಧರ್ಮದ ಬಗ್ಗೆ ತಿಳಿದುಕೊಳ್ಳಲಿ

ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:14 IST
Last Updated 1 ಆಗಸ್ಟ್ 2019, 19:14 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ   

ದಾವಣಗೆರೆ: ಪೇಜಾವರ ಸ್ವಾಮೀಜಿ ಪದೇ ಪದೇ ಪಂಥಾಹ್ವಾನ ಮಾಡುವುದನ್ನು ಬಿಟ್ಟು ಲಿಂಗಾಯತ ಧರ್ಮದ ಬಗ್ಗೆ ಮೊದಲು ತಿಳಿದುಕೊಳ್ಳಲಿ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಸಾಣೇಹಳ್ಳಿ ಸ್ವಾಮೀಜಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಚಿತ್ರದುರ್ಗ, ಸಿರಿಗೆರೆ, ಉಳವಿ, ಕೂಡಲಸಂಗಮ, ಗದುಗಿನ ಮಠ ಸೇರಿ ರಾಜ್ಯದ ಯಾವುದೇ ಲಿಂಗಾಯತ ಮಠಕ್ಕೆ ಪೇಜಾವರ ಸ್ವಾಮೀಜಿ ಬಂದು ಲಿಂಗಾಯತ ಧರ್ಮದ ಬಗ್ಗೆ ತಿಳಿದುಕೊಳ್ಳಲಿ’ ಎಂದು ಹೇಳಿದರು.

ಹಿಂದೂ ಧರ್ಮ, ಪೇಜಾವರ ಶ್ರೀಗಳು ಪಾಲಿಸುವ ವೈಷ್ಣವ ಪಂಥ ವರ್ಣಾಶ್ರಮ ಧರ್ಮವನ್ನು ಪಾಲಿಸುವಂಥದ್ದು. ಅಲ್ಲಿ ಮೇಲು, ಕೀಳು ಎಂಬ ಭೇದಗಳಿವೆ. ಕೃಷ್ಣ ಮಠದಲ್ಲಿಯೇ ಪಂಕ್ತಿ ಭೇದವಿದೆ. ಪೇಜಾವರ ಸ್ವಾಮೀಜಿಯ ಪ್ರಶ್ನೆಗಳಿಗೆ 12ನೇ ಶತಮಾನದಲ್ಲಿಯೇ ಬಸವಣ್ಣ ಉತ್ತರ ನೀಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ನ್ಯಾಯಮೂರ್ತಿ ನಾಗಮೋಹನದಾಸ್‌ ಅವರು ಲಿಂಗಾಯತ ಧರ್ಮದ ಬಗ್ಗೆ ನೀಡಿರುವ ವರದಿಯನ್ನು ಸ್ವಾಮೀಜಿ ವಿಶ್ಲೇಷಣೆ ಮಾಡಲಿ. ಜೈನ, ಬೌದ್ಧ, ಪಾರ್ಸಿ, ಸಿಖ್‌ ಮುಂತಾದ ಧರ್ಮಗಳಿಗೆ ಮಾನ್ಯತೆ ನೀಡಿದಂತೆ ಲಿಂಗಾಯತ ಧರ್ಮಕ್ಕೂ ಮಾನ್ಯತೆ ನೀಡಿ ಎಂದು ಕೇಳುತ್ತಿದ್ದೇವೆ’ ಎಂದು ತಿಳಿಸಿದರು.

ಶಾಮನೂರು ಲಿಂಗಾಯತ: ಶಾಮನೂರು ಶಿವಶಂಕರಪ್ಪ ಲಿಂಗಾಯತ. ಅವರು ಬಸವಣ್ಣನ ಪರ ಇದ್ದಾರೆ. ಆದರೆ, ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವುದರಿಂದ ಎರಡೂ ಪರಂಪರೆಗಳಿಗೆ ತೊಂದರೆಯಾಗದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.