ADVERTISEMENT

ಬೆಳಗಾವಿ: ಒಣ ಎಲೆಗಳಿಂದ ಗೊಬ್ಬರ ತಯಾರಿಕೆ

ನಗರದ ಅಲ್ಲಲ್ಲಿ ಸಂಗ್ರಹಕ್ಕೆ ಸ್ಥಳ ನಿಗದಿ

ಎಂ.ಮಹೇಶ
Published 22 ಜುಲೈ 2020, 8:42 IST
Last Updated 22 ಜುಲೈ 2020, 8:42 IST
ಬೆಳಗಾವಿಯ ಮಹಾನಗರ‍ಪಾಲಿಕೆ ಆಯುಕ್ತರ ನಿವಾಸದ ಬಳಿ ಒಣ ಎಲೆಗಳ ಸಂಗ್ರಹಕ್ಕೆ ಸ್ಥಳ ನಿಗದಿಪಡಿಸಲಾಗಿದೆ–ಪ್ರಜಾವಾಣಿ ಚಿತ್ರ
ಬೆಳಗಾವಿಯ ಮಹಾನಗರ‍ಪಾಲಿಕೆ ಆಯುಕ್ತರ ನಿವಾಸದ ಬಳಿ ಒಣ ಎಲೆಗಳ ಸಂಗ್ರಹಕ್ಕೆ ಸ್ಥಳ ನಿಗದಿಪಡಿಸಲಾಗಿದೆ–ಪ್ರಜಾವಾಣಿ ಚಿತ್ರ   

ಬೆಳಗಾವಿ: ಮರಗಳಿಂದ ಉದುರುವ ಒಣ ಎಲೆಗಳು ವ್ಯರ್ಥವಾಗುವುದನ್ನು ತಪ್ಪಿಸಲು ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಗೊಬ್ಬರವನ್ನಾಗಿ ತಯಾರಿಸಿ ಮರುಬಳಕೆ ಮಾಡಲು ಇಲ್ಲಿನ ಮಹಾನಗರಪಾಲಿಕೆಯಿಂದ ಯೋಜನೆ ರೂಪಿಸಲಾಗಿದೆ.

ಎಲೆಗಳನ್ನು ಸಂಗ್ರಹಿಸುವುದಕ್ಕಾಗಿಯೇ ನಗರದ ಅಲ್ಲಲ್ಲಿ ಕೇಂದ್ರಗಳನ್ನು ಮಾಡಲಾಗಿದೆ. ಸುತ್ತಲೂ ಹಸಿರು ಪರದೆಯನ್ನು ಕಟ್ಟಿ ಜಾಗ ನಿಗದಿಪಡಿಸಲಾಗಿದೆ. ಪೌರಕಾರ್ಮಿಕರು ನಿತ್ಯವೂ ಕಸ ಗುಡಿಸುವ ವೇಳೆಯಲ್ಲಿ ಎಲೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ತಂದು ನಿಗದಿತ ಸ್ಥಳದಲ್ಲಿ ಹಾಕುತ್ತಾರೆ. ತಿಂಗಳ ಹಿಂದಿನಿಂದ ಈ ಉಪಕ್ರಮವನ್ನು ಅನುಸರಿಸಲಾಗುತ್ತಿದೆ.

ಇಲ್ಲಿನ ವಿಶ್ವೇಶ್ವರಯ್ಯನಗರ ಪ್ರದೇಶದ ಸುತ್ತಮುತ್ತ ವಿವಿಧ ಇಲಾಖೆಗಳ ಅಧಿಕಾರಿಗಳ ವಸತಿ ಗೃಹಗಳ ಬಳಿ ಬಹಳಷ್ಟು ಮರಗಳಿವೆ. ಅವುಗಳಿಂದ ಬೀಳುವ ಎಲೆಗಳನ್ನು ಪ್ರಸ್ತುತ ಇತರ ತ್ಯಾಜ್ಯದೊಂದಿಗೆ ಸೇರಿಸಿ ಸಾಗಿಸಲಾಗುತ್ತಿತ್ತು. ಇಲ್ಲವೇ ಗುಡಿಸಿ ಅಲ್ಲಲ್ಲಿ ಗುಡ್ಡೆ ಮಾಡಿ ಬೆಂಕಿ ಹಾಕಿ ನಾಶ‍ಪಡಿಸಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಿ ಎಲೆಗಳನ್ನು ‘ಸಂಪನ್ಮೂಲ’ವನ್ನಾಗಿ ಮಾಡುವುದು ಯೋಜನೆಯ ಉದ್ದೇಶವಾಗಿದೆ.

ADVERTISEMENT

‘ನಗರದಲ್ಲಿ ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮನೆ–ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ, ಒಣ ಎಲೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಇರಲಿಲ್ಲ. ಇದರಿಂದ ಅವುಗಳು ವ್ಯರ್ಥವಾಗುತ್ತಿದ್ದವು. ಅವುಗಳಿಂದ ಉತ್ತಮವಾದ ಗೊಬ್ಬರ ತಯಾರಿಕೆಗೆ ಅವಕಾಶವಿದೆ. ಹೀಗಾಗಿ, ಅಲ್ಲಲ್ಲಿ ಸಂಗ್ರಹಿಸಲಾಗುತ್ತಿದೆ. ಅವುಗಳು ಕೊಳೆತು ಗೊಬ್ಬರವಾದ ನಂತರ, ಅದನ್ನು ನಗರದಾದ್ಯಂತ ಇರುವ ಉದ್ಯಾನಗಳು, ಗಿಡ–ಮರಗಳಿಗೆ ಬಳಸಲಾಗುವುದು’ ಎಂದು ಆಯುಕ್ತ ಕೆ.ಎಚ್. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಅಲ್ಲಿ ಘಟಕ ಸ್ಥಾಪಿಸಲಾಗುವುದು. ಸದ್ಯ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಒಣ ಎಲೆಗಳ ಸಂಗ್ರಹ ಕೇಂದ್ರ ಮಾಡಲಾಗಿದೆ. ಒಣ ಎಲೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ತಂದು ಹಾಕುವಂತೆ ಆಯಾ ಭಾಗದ ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಗೊಬ್ಬರ ತಯಾರಿಕೆಯಿಂದ ಎಲೆಗಳ ಮರುಬಳಕೆ ಸಾಧ್ಯವಾಗಲಿದೆ. ಅವುಗಳು ಇತರ ತ್ಯಾಜ್ಯದೊಂದಿಗೆ ಮಿಶ್ರವಾಗಿ ತ್ಯಾಜ್ಯ ವಿಲೇವಾರಿ ಘಟಕ ಸೇರಿ ವ್ಯರ್ಥವಾಗುವುದು ತಪ್ಪುತ್ತದೆ. ಬೆಂಕಿ ಹಾಕುವುದರಿಂದ ಪರಿಸರ ಮಾಲಿನ್ಯ ಆಗುವುದಕ್ಕೂ ಕಡಿವಾಣ ಬೀಳುತ್ತದೆ. ಉದ್ಯಾನಗಳ ನಿರ್ವಹಣೆಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.