ಕಾರವಾರ: ‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಿಂದಿ ಶಿಕ್ಷಕರಿಗೆ ಬಿ.ಇಡಿ ಕಡ್ಡಾಯ ಮಾಡಿದ್ದ ನಿಯಮವನ್ನು ಕೈಬಿಡಲಾಗಿದೆ. ಹಿಂದಿ ಪ್ರಚಾರಸಭಾಗಳ ಪದವಿ ಪಡೆದವರು ಬೋಧನೆ ಮಾಡಲು ಇನ್ನು ಮುಂದೆ ಯಾವುದೇ ತೊಡಕು ಇಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.
ಇಲ್ಲಿಗೆ ಸಮೀಪದ ಶೇಜವಾಡದಲ್ಲಿ ಮಂಗಳವಾರ ಆಯೋಜಿಸಿದ್ದಹಿಂದಿ ಭಾಷಾ ಶಿಕ್ಷಕರ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘2002ರಲ್ಲಿ ಹಿಂದಿ ಶಿಕ್ಷಕರ ನೇಮಕಾತಿ ಮಾಡುವಾಗ ಬಿ.ಇಡಿ ಕಡ್ಡಾಯ ಇರಲಿಲ್ಲ. ಆದರೆ, 2016ರಲ್ಲಿ ಶಿಕ್ಷಣ ಇಲಾಖೆಯು ಅದನ್ನು ಕಡ್ಡಾಯ ಮಾಡಿತು. ಇದರಿಂದ ನೂರಾರು ಶಿಕ್ಷಕರ ವೇತನಾನುದಾನಕ್ಕೆತೊಂದರೆಯಾಯಿತು. ಇದನ್ನು ಮನಗಂಡು ಹಳೆಯ ನಿಯಮವನ್ನೇ ಮುಂದುವರಿಸುವಂತೆ ಕಡತಕ್ಕೆ ಸೋಮವಾರ ಸಹಿ ಮಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಒಬ್ಬ ಹಿಂದಿ ಶಿಕ್ಷಕರಿದ್ದರೂ ಹೆಚ್ಚುವರಿ ಎಂದು ಪರಿಗಣಿಸಲು ಮುಂದಾಗಿರುವುದು ಜಗತ್ತಿನ ದೊಡ್ಡ ಮೂರ್ಖತನ. ಶಿಕ್ಷಣ ಇಲಾಖೆಯಲ್ಲಿ ಶೇ 95ರಷ್ಟು ಮಂದಿ ಅಂತಹವರೇ ಇದ್ದಾರೆ. ಹೇಳಿದ್ದನ್ನು ಕೇಳುವಷ್ಟೂತಿಳವಳಿಕೆ ಇಲ್ಲ. ಅವರನ್ನು ಸರಿ ಮಾಡದಿದ್ದರೆ ಇಲಾಖೆಯನ್ನು ಸರ್ವನಾಶ ಮಾಡ್ತಾರೆ ಎಂದು ನಾನು ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.