ಬಳ್ಳಾರಿ: ‘ಸಿಂಡಿಕೇಟ್ ಸದಸ್ಯರಾದ ದೊಡ್ಡಬಸವನಗೌಡ ಮತ್ತು ವರುಣ್ ಕುಮಾರ್ ರೆಡ್ಡಿ, ಹಿಂದಿನ ಸಿಂಡಿಕೇಟ್ ಸದಸ್ಯ ಅಲ್ಲಾವಲಿ ಬಾಷಾ ಕೊಲ್ಮಿ, ಬೋಧಕರ ನೇಮಕಾತಿ ಪ್ರಕ್ರಿಯೆಯಲ್ಲಿ ಒತ್ತಡ ಹೇರಿದ್ದರು ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ಆ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ, ಬುಧವಾರ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ!
‘ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯ ಮೇಲೆ ಹಾಲಿ ಸಿಂಡಿಕೇಟ್ ಸದಸ್ಯರಾದ ವರುಣ್ ಕುಮಾರ್ ಹಾಗೂ ಮಾಜಿ ಸದಸ್ಯ ಬಾಷಾ ಕೊಲ್ಮಿ ಯಾವುದೇ ರೀತಿಯಲ್ಲಿ ಒತ್ತಡ ತಂದಿಲ್ಲ’ ಎಂದಿದ್ದಾರೆ. ಆದರೆ ದೊಡ್ಡಬಸವನಗೌಡ ಅವರ ಕುರಿತು ಏನೂ ಹೇಳದಿರುವುದು ಅನುಮಾನಕ್ಕೆ ದಾರಿ ಮಾಡಿದೆ.
‘ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ, ಈ ಇಬ್ಬರು ನೇಮಕಾತಿ ಪ್ರಕ್ರಿಯೆ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬರೆದಿದ್ದೆ. ಆದರೆ ಅದು ಒತ್ತಡದಲ್ಲಿ ಬಂದಿರುವ ಮಾತು. ಅದಕ್ಕೆ ವಿಷಾದಿಸುತ್ತೇನೆ’ ಎಂದು ಬುಧವಾರ ತಿಳಿಸಿದ್ದಾರೆ.
‘ಬೋಧಕೇತರ ಸಿಬ್ಬಂದಿ ನೇಮಕಾತಿಯ ಮೇಲುಸ್ತುವಾರಿ ಸಮಿತಿಯಲ್ಲಿ ವರುಣ್ ಕುಮಾರ್ ರೆಡ್ಡಿ ಅವರು ನಮ್ಮ ಮೇಲೆ ಒತ್ತಡ ಹಾಕಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.