ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನೂತನ ನಿರ್ದೇಶಕ ರನ್ನಾಗಿ ಗಣಿತಜ್ಞ ಪ್ರೊ.ಗೋವಿಂದನ್ ರಂಗರಾಜನ್ ಅವರನ್ನು ನೇಮಕ ಮಾಡಲಾಗಿದೆ.
ಹಾಲಿ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್ ಅವರು ಇದೇ 31ರಂದು ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಐಐಎಸ್ಸಿ ಆಡಳಿತ ಮಂಡಳಿ ಸಭೆ ಸೇರಿ ಗೋವಿಂದನ್ ಅವರನ್ನು ಆಯ್ಕೆ ಮಾಡಿದೆ. ರಾಷ್ಟ್ರಪತಿಯವರ ಒಪ್ಪಿಗೆ ಬಳಿಕ, ಅವರು ಆಗಸ್ಟ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಗೋವಿಂದನ್ ಅವರು ಐಐಎಸ್ಸಿಯ 10 ವಿವಿಧ ವಿಜ್ಞಾನ ವಿಭಾಗಗಳು ಮತ್ತು ಕೇಂದ್ರಗಳನ್ನು ಒಳಗೊಂಡ ಅಂತರ್ಶಿಸ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ನಿಧಿ ಸಂಗ್ರಹ ಮತ್ತು ಹಳೆ ವಿದ್ಯಾರ್ಥಿ
ಗಳನ್ನು ಸಂಸ್ಥೆಯ ಅಭ್ಯುದಯಕ್ಕೆ ಬಳಸಿಕೊಳ್ಳುವಲ್ಲಿ ಶ್ರಮಿಸುತ್ತಿದ್ದಾರೆ.
ಐಐಎಸ್ಸಿ ಗಣಿತ ವಿಭಾಗದ ಮುಖ್ಯಸ್ಥರಾಗಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ನಲ್ಲಿ (ಪಿಲಾನಿ) ಎಂಎಸ್ಸಿ ಆನರ್ಸ್, ಅಮೆರಿಕಾದ ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಬಳಿಕ ಅವರು ಅಮೆರಿಕಾದ ಲಾರೆನ್ಸ್ ಬರ್ಕಲಿ
ಲ್ಯಾಬೋರೇಟರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 1992ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದ್ದರು.
ಅತಿ ದೊಡ್ಡ ಗೌರವ: ತಮ್ಮ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಗೋವಿಂದನ್, ‘111 ವರ್ಷಗಳಷ್ಟು ಹಳೆಯ ಪ್ರತಿಷ್ಠಿತ ಸಂಸ್ಥೆಯ ನಿರ್ದೇಶಕರ ನ್ನಾಗಿ ಆಯ್ಕೆ ಮಾಡಿರುವುದು ದೊಡ್ಡ ಗೌರವ. ಸಂಸ್ಥೆಯ ಘನತೆ, ಗೌರವ ಮತ್ತು ಪರಂಪರೆಯನ್ನು ಎತ್ತಿ ಹಿಡಿಯಲು ಶ್ರಮಿಸುತ್ತೇನೆ. ಸಂಸ್ಥೆಯನ್ನು ಇನ್ನಷ್ಟು ಔನ್ನತ್ಯಕ್ಕೆ ಒಯ್ಯಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.