ADVERTISEMENT

ಕಾಲ್ತುಳಿತ ಘಟನೆಯ ಹಿಂದೆ ಬಿಜೆಪಿ ಷಡ್ಯಂತ್ರ: ಕಾಂಗ್ರೆಸ್‌ ದೂರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:17 IST
Last Updated 16 ಜೂನ್ 2025, 15:17 IST
<div class="paragraphs"><p>ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ</p></div>

ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ

   

ಪಿಟಿಐ

ಬೆಂಗಳೂರು: ‘ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಯ ಹಿಂದೆ ಬಿಜೆಪಿಯ ಷಡ್ಯಂತ್ರ ಅಡಗಿದೆ’ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನೇತೃತ್ವದ ಕಾಂಗ್ರೆಸ್‌ ನಿಯೋಗ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಆಯೋಗಕ್ಕೆ ಸೋಮವಾರ ದೂರು ನೀಡಿದೆ.

ADVERTISEMENT

ದೂರು ನೀಡಿದ ಬಳಿಕ ಮಾತನಾಡಿದ ಲಕ್ಷ್ಮಣ್, ‘ಬಿಜೆಪಿಯವರ ಟ್ವೀಟ್‌ಗಳು ಮತ್ತು ವಿಡಿಯೊಗಳನ್ನು ದೂರಿನ ಜೊತೆ ಸಾಕ್ಷ್ಯವಾಗಿ ಆಯೋಗಕ್ಕೆ ನೀಡಲಾಗಿದೆ’ ಎಂದರು.

‘ಆರ್‌ಸಿಬಿ ವಿಜಯೋತ್ಸವದ ವೇಳೆ ಜನಸಂದಣಿ ನಡುವೆ ಬಿಜೆಪಿಯ ಕೆಲವು ಗೂಂಡಾಗಳು ಸೇರಿಕೊಂಡು ನೂಕಾಟ, ತಳ್ಳಾಟ ಉಂಟಾಗುವಂತೆ ಮಾಡಿದ್ದಾರೆ. ಯಾರು ಆ ರೀತಿ ತಳ್ಳಿದ್ದಾರೆ ಎಂಬುದನ್ನು ಗುರುತು ಮಾಡಿ ವಿಡಿಯೊ ನೀಡಿದ್ದೇವೆ. ಇದರ ಹಿಂದೆ ದೊಡ್ಡ ಸಂಚು ಇರುವುದು ನಿಶ್ಚಿತ. ಹೀಗಾಗಿ, ವಿವಿಧ ಆಯಾಮಗಳಿಂದ ಈ ದುರಂತದ ತನಿಖೆ ಆಗಬೇಕು’ ಎಂದು ಲಕ್ಷ್ಮಣ್ ಆಗ್ರಹಿಸಿದರು.

‘ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ, ಈ ದುರಂತದ ಹಿಂದೆ ಏನೊ ಷಡ್ಯಂತ್ರ ಅಡಗಿರುವ ಶಂಕೆ ಮೂಡುತ್ತಿದೆ. ಅಲ್ಲದೆ, ಘಟನೆಯ ತನಿಖೆಗೆ ಸರ್ಕಾರ ರಚಿಸಿರುವ ನ್ಯಾಯಮೂರ್ತಿ ಕುನ್ಹ ಅವರ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಬಹಳ ತುಚ್ಛವಾಗಿ ಮಾತನಾಡಿದ್ದಾರೆ. ಅಶೋಕ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.