ADVERTISEMENT

ಪಠ್ಯಪರಿಷ್ಕರಣೆ: ಬಿಜೆಪಿ ಶಾಸಕರ ಅಸಮಾಧಾನ: ಎಂ.ಪಿ.ಕುಮಾರಸ್ವಾಮಿ ಪತ್ರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 11:16 IST
Last Updated 8 ಜೂನ್ 2022, 11:16 IST
   

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯ ಕೆಲವು ಅಂಶಗಳ ಬಗ್ಗೆ ಆಡಳಿತ ಪಕ್ಷದ ಸದಸ್ಯರಲ್ಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಪಠ್ಯದಲ್ಲಿ ಅಂಬೇಡ್ಕರ್‌ ಅವರ ಹೆಸರಿನ ಮುಂದಿದ್ದ ‘ಸಂವಿಧಾನ ಶಿಲ್ಪಿ’ ಪದಕ್ಕೆ ಕತ್ತರಿ ಹಾಕಿದ್ದಕ್ಕೆ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಇನ್ನಿಬ್ಬರು ಶಾಸಕ ಅಸಮಾಧಾನ ತೋಡಿಕೊಂಡಿದ್ದಾರೆ.

ಮೂಡಿಗೆರೆಯ ಶಾಸಕ ಎಂ.ಪಿ.ಕುಮಾರಸ್ವಾಮಿ ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದಿದ್ದಾರೆ. ಸಂವಿಧಾನಶಿಲ್ಪಿ ಪದವನ್ನು ಮತ್ತೆ ಹಾಕುವ ಮೂಲಕ ನಮ್ಮ ಸರ್ಕಾರ ತೋರುವ ಗೌರವ ಮತ್ತು ಬದ್ಧತೆಯನ್ನು ಸಾಬೀತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

9 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಡಾ. ಅಂಬೇಡ್ಕರ್ ಅವರ ಆತ್ಮವೇ ಆಗಿರುವ ಸಂವಿಧಾನ ಶಿಲ್ಪಿ ಎಂಬ ನಾಮಾಂಕಿತವನ್ನು ಕೈಬಿಟ್ಟಿದ್ದು ವಿಕೃತ ನಡೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಪ್ರಮಾದವನ್ನು ಸರಿಪಡಿಸಿ ಮುದ್ರಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದು, ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ADVERTISEMENT

ಡಾ.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಏಕೆ ಸಂಭೋದಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾಗುವ ದೃಷ್ಟಿಯಿಂದ ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರಲ್ಲಿ ಒಬ್ಬರಾದ ಟಿ.ಟಿ.ಕೃಷ್ಣಮಾಚಾರಿ ಸಂವಿಧಾನ ಸಭೆಯಲ್ಲಿ ಅಧಿಕೃತವಾಗಿ ದಾಖಲು ಮಾಡಿರುವ ಈ ಕೆಳಗಿನ ಹೇಳಿಕೆಯನ್ನು ತಿದ್ದುಪಡಿ ಮಾಡುತ್ತಿರುವ ಪಠ್ಯದಲ್ಲಿ ಮುದ್ರಿಸಿ ಸಂವಿಧಾನ ಶಿಲ್ಪಿಯ ಬಗ್ಗೆ ನಮ್ಮ ಸರ್ಕಾರವು ತೋರುವ ಗೌರವವನ್ನು ಸಾಬೀತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜುಗೌಡ ಬೇಸರ:

6 ನೇ ತರಗತಿಯ ಸಮಾಜ–ವಿಜ್ಞಾನ ಪಠ್ಯಪುಸ್ತಕದ ಭಾಗ–2 ರ ಪುಟ ಸಂಖ್ಯೆ 82 ರಲ್ಲಿ ಸುರಪುರ ನಾಯಕರು ಶೀರ್ಷಿಕೆಯಡಿ ಸುರಪುರ ರಾಜಾ ವೆಂಕಟಪ್ಪ ನಾಯಕರ ಭಾವಚಿತ್ರವನ್ನು ಒಳಗೊಂಡ ವಿಸ್ತಾರವಾದ ಒಂದು ಪುಟದ ಪಠ್ಯವು ಇತ್ತು. ಶೀರ್ಷಿಕೆ ಮತ್ತು ವೆಂಕಟಪ್ಪ ನಾಯಕರ ಚಿತ್ರ ತೆಗೆದುಹಾಕಿ ಪಠ್ಯ ವಿಷಯ ಕಡಿತ ಮಾಡಿದ್ದು ಬೇಸರದ ಸಂಗತಿ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಹೇಳಿದ್ದಾರೆ.

ಪಾಠವನ್ನು ಈ ಹಿಂದೆ ಇದ್ದಂತೆಯೇ ಉಳಿಸಿಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.