ಬೆಂಗಳೂರು: ‘ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಮುನ್ನ ಬಳ್ಳಾರಿ ಜಪ ಮಾಡುತ್ತಿದ್ದರು. ಈಗ ಅಲ್ಲಿ ಸಾಲು ಸಾಲು ಬಾಣಂತಿಯರು ಸಾಯುತ್ತಿದ್ದರೂ ಸುಳಿಯುತ್ತಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಳ್ಳಾರಿಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ, ಆರೋಗ್ಯ ಸಚಿವರು ಅಲ್ಲಿಗೆ ತೆರಳುವ ಸೌಜನ್ಯ ತೋರಲಿಲ್ಲ. ಮಹಿಳೆಯರ ಜೀವ ರಕ್ಷಣೆ ಇವರಿಗೆ ಬೇಡವಾಯಿತೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರು ಹಲವು ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವುಗಳಿಂದ ಬಿಡಿಸಿಕೊಳ್ಳಲೇ ಅವರು ಒದ್ದಾಡುತ್ತಿದ್ದಾರೆ. ಅತ್ತಲೇ ಗಮನವಿದ್ದು, ರಾಜ್ಯದ ಆಡಳಿತವನ್ನು ಕಡೆಗಣಿಸಿದ್ದಾರೆ’ ಎಂದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಇಲಾಖೆಯ ಆಡಳಿತ ಅವರ ಕೈತಪ್ಪಿದೆ. ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
‘ಜನರ ಜೀವದ ಬಗ್ಗೆ ಸರ್ಕಾರಕ್ಕಿರುವ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರದ ಕಾರಣದಿಂದಲೇ ಇಂತಹ ಅವಘಡಗಳು ಸಂಭವಿಸಿವೆ. ರಾಜ್ಯ ಸರ್ಕಾರವು ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.