ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಸಂಜೆ 6 ಗಂಟೆಗೆ ದೆಹಲಿಯಿಂದಲೇ ‘ಕರ್ನಾಟಕ ಜನಸಂವಾದ ವರ್ಚುವಲ್ ರ್ಯಾಲಿ’ ನಡೆಸಲಿದ್ದಾರೆ.
‘ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನ’ದ ಭಾಗವಾಗಿ ವಿಡಿಯೊ ಸಂವಾದ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಫೇಸ್ಬುಕ್, ಯೂಟ್ಯೂಬ್ ಚಾನಲ್ ಹಾಗೂ ಕೇಬಲ್ ಟಿವಿಗಳಲ್ಲಿ ನೇರಪ್ರಸಾರ ನಡೆಯಲಿದೆ.ಸಂಜೆ 7ರಿಂದ 8 ಗಂಟೆಯವರೆಗೆ ‘ಚೀನಾ ಸೋಲಿಸಿ-ಭಾರತ ಗೆಲ್ಲಿಸೋಣ’ ಅಭಿಯಾನ ನಡೆಯಲಿದೆ. ರಾಜ್ಯದ 58 ಸಾವಿರ ಬೂತ್ಗಳ 50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವದೇಶಿ ಅಭಿಯಾನದ ಪ್ರತಿಜ್ಞಾ ಸಂಕಲ್ಪ ನಡೆಸಲು ಪಕ್ಷ ತೀರ್ಮಾನಿಸಿದೆ.
ಭೇಟಿಗೆ ನಿಷೇಧ: ವರ್ಚುವಲ್ ರ್ಯಾಲಿ ಸಂದರ್ಭದಲ್ಲಿ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಜರಿರಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಪಕ್ಷದ ಕಚೇರಿಗೆ ಭೇಟಿ ನಿರ್ಬಂಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.