ಬೆಂಗಳೂರು: ಕಪ್ಪು ಶಿಲೀಂದ್ರ ಸೋಂಕಿಗೆ ಒಳಗಾದವರ ಚಿಕಿತ್ಸೆಗೆ ಔಷಧ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗೆ ಚುಚ್ಚುಮದ್ದು ಕೊರತೆ ಇದೆ ಎಂದು ವಕೀಲ ಪಿ. ರವೀಂದ್ರ ಅವರು ಬರೆದಿದ್ದ ಪತ್ರ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತು.
‘ಕಪ್ಪು ಶಿಲೀಂದ್ರ ಸೋಂಕಿಗೆ ಒಳಗಾದವರ ಸಂಖ್ಯೆ ಎಷ್ಟು, ಚಿಕಿತ್ಸೆಗೆ ಲಭ್ಯ ಇರುವ ಔಷಧದ ಪ್ರಮಾಣ ಎಷ್ಟು’ ಎಂಬ ವಿವರ ಸಲ್ಲಿಸುವಂತೆ ಪೀಠ ಸೂಚಿಸಿತು. ‘ರಾಜ್ಯದಲ್ಲಿ ಚುಚ್ಚುಮದ್ದು ಕೊರತೆ ಇದೆ. ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೊರತೆ ಸರಿದೂಗಿಸಲು ಪ್ರಯತ್ನಿಸುತ್ತಿದೆ’ ಎಂದು ಅಡ್ವೊಕೇಟ್ ಜನರಲ್ ಮಾಹಿತಿ ನೀಡಿದರು.
‘ಕಪ್ಪು ಶಿಲೀಂದ್ರ ಚಿಕಿತ್ಸೆಗೆ ಔಷಧ ಭಾರತದಲ್ಲಿ ತಯಾರಾಗದ ಕಾರಣ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.
ಕಪ್ಪು ಶಿಲೀಂದ್ರ ಸೋಂಕಿನಿಂದ ಎಷ್ಟು ಜನರ ಬಳಲುತ್ತಿದ್ದಾರೆ ಎಂಬುದರ ಕುರಿತು ಜಿಲ್ಲಾವಾರು ಮಾಹಿತಿ ನೀಡುವಂತೆ ತಿಳಿಸಿದ ಪೀಠ, ‘ಔಷಧ ಕೊರತೆಯನ್ನು ಕೂಡಲೇ ಸರಿದೂಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.