ಬೆಂಗಳೂರು: ಶಿಲೀಂಧ್ರ ಸೋಕಿಗೆ(ಮ್ಯುಕೋರ್ ಮೈಕೋಸಿಸ್-ಬ್ಯ್ಲಾಕ್ ಫಂಗಸ್) ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಗಳು ರೋಗಿಗೆ ಚಿಕಿತ್ಸೆ ನಿರಾಕರಿಸಿ, ವಾಪಸ್ ಕಳುಹಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಶಿಲೀಂಧ್ರ ಸೋಂಕಿನ ಚಿಕಿತ್ಸೆ ಸಂಬಂಧ ಮಾರ್ಗಸೂಚಿ ಹೊರಡಿಸಿದೆ. ಈ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಡಾ.ಎಚ್.ಎಸ್. ಸತೀಶ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿದೆ. ಈ ಕಾಯಿಲೆಯನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆಯ (ಕೆಪಿಎಂಇ) ಸೆಕ್ಷನ್ 7ಬಿ ಅಡಿಯಲ್ಲಿ ಸೂಚಿಸಬಹುದಾದ ರೋಗ ಎಂದು ಪರಿಗಣಿಸಲಾಗಿದೆ. ಎಲ್ಲ ವೈದ್ಯಕೀಯ ಸಂಸ್ಥೆಗಳು ತಮ್ಮ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದ ರೋಗಿಗಳ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅನಿಯಂತ್ರಿತ ಮಧುಮೇಹ ಸಮಸ್ಯೆ ಎದುರಿಸುತ್ತಿರುವ ಹಾಗೂ ವೈದ್ಯಕೀಯ ಕಾರಣಕ್ಕಾಗಿ ಸ್ಟೆರಾಯ್ಡ್ ಪಡೆದುಕೊಂಡ ಕೋವಿಡ್ ಪೀಡಿತರು ಶಿಲೀಂಧ್ರ ಸೋಂಕಿನ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಬೇಕು. ಮುಖದ ನೋವು, ಕೆನ್ನೆಯ ಭಾಗದಲ್ಲಿ ನೋವು, ಮೂಗಿನಲ್ಲಿ ರಕ್ತ ಸೋರುವಿಕೆ, ಮೂಗು ಕಟ್ಟುವಿಕೆ, ಕಣ್ಣು ಕೆಂಪಾಗುವಿಕೆ ಸೇರಿದಂತೆ ವಿವಿಧ ಲಕ್ಷಣಗಳು ಗೋಚರಿಸಿದಾಗ ತಜ್ಞ ವೈದ್ಯರ ಬಳಿ ತೆರಳಿ, ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ.
ಶಿಲೀಂಧ್ರ ಸೋಂಕು ತಡೆಯಲು ಮಧುಮೇಹ ನಿಯಂತ್ರಣ, ಸ್ಟೆರಾಯ್ಡ್ಗಳ ಬಳಕೆ ತಗ್ಗಿಸುವಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಪೀಡಿತರು ಚೇತರಿಸಿಕೊಂಡು ತೆರಳುವಾಗ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳಲು ಸೂಚಿಸಬೇಕು. ಶಿಲೀಂಧ್ರ ಸೋಂಕಿನ ಲಕ್ಷಣಗಳ ಬಗ್ಗೆ ತಪಾಸಣೆ ನಡೆಸಿ, ಸೋಂಕಿತರಾಗಿಲ್ಲ ಎನ್ನುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.