ADVERTISEMENT

‘ಗೋರಖ್‌ಪುರ್‌ ಹಾಸ್ಪಿಟಲ್ ಟ್ರಾಜಿಡಿ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 18:18 IST
Last Updated 31 ಜನವರಿ 2022, 18:18 IST
ವೈದ್ಯ ಕಫೀಲ್ ಖಾನ್ ತಮ್ಮ ಪುಸ್ತಕದ ಕುರಿತು ಮಾತನಾಡಿದರು.
ವೈದ್ಯ ಕಫೀಲ್ ಖಾನ್ ತಮ್ಮ ಪುಸ್ತಕದ ಕುರಿತು ಮಾತನಾಡಿದರು.   

ಬೆಂಗಳೂರು: ಮೆಡಿಕಲ್ ಸರ್ವಿಸ್ ಸೆಂಟರ್ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯ ಕಫೀಲ್ ಖಾನ್ ಅವರು ಬರೆದಿರುವ ‘ಗೋರಖ್‌ಪುರ್‌ ಹಾಸ್ಪಿಟಲ್ ಟ್ರಾಜಿಡಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದಕಫೀಲ್ ಖಾನ್,‘2017ರಲ್ಲಿ ಗೋರಖ್ ಪುರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಮ್ಲಜನಕ ಲಭ್ಯವಾಗದೆ, ಮಕ್ಕಳು ಸೇರಿದಂತೆ ಹಲವರು ಮರಣ ಹೊಂದಿದರು. ಆ ದುರಂತದಲ್ಲಿ ಮೃತಪಟ್ಟವರಿಗೆ ಈ‍ಪುಸ್ತಕ ಅರ್ಪಿಸಿದ್ದೇನೆ. ಅವರ ಕಣ್ಣೀರ ಕಥೆಗಳನ್ನೂ ಪುಸ್ತಕದಲ್ಲಿ ಅನಾವರಣಗೊಳಿಸಿದ್ದೇನೆ’ ಎಂದರು.

‘ಸ್ವಂತ ಹಣದಿಂದ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡಿದ್ದೆ. ಈ ವಿಚಾರ ತಿಳಿದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನನ್ನನ್ನು ಕರೆದಿದ್ದರು. ಅವರು ನನ್ನ ಕೆಲಸಕ್ಕೆ ಬೆನ್ನು ತಟ್ಟುತ್ತಾರೆ ಎಂದು ಭಾವಿಸಿದ್ದೆ. ಆದರೆ, ಏಕವಚನದಲ್ಲಿ ನಿಂದಿಸಿದ್ದರು’ ಎಂದು ಹೇಳಿದರು.

ADVERTISEMENT

‘ನನ್ನ ವೃತ್ತಿ ಮತ್ತು ಕರ್ತವ್ಯವನ್ನು ಮಾನವೀಯ ದೃಷ್ಟಿಯಿಂದ ನಿಭಾಯಿಸಿದ್ದೆ. ಆದರೆ, ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಜೈಲಿಗೂ ಕಳಿಸಿದರು. ಜೈಲಿನಲ್ಲಿ ಬೇರೆ ಪ್ರಪಂಚದ ಅನುಭವವಾಯಿತು. ಜನರ ಬೆಂಬಲದಿಂದಲೇ ಇಂದು ಜೈಲಿನಿಂದ ಹೊರಬಂದಿದ್ದೇನೆ’ ಎಂದರು.

‘ನಾನೊಬ್ಬ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ನನ್ನ ವಿರುದ್ಧ ಈ ರೀತಿಯ ಷಡ್ಯಂತ್ರ ನಡೆದಿದೆ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನನ್ನ ಜಾಗದಲ್ಲಿ ಖಾನ್ ಬದಲಿಗೆ ಬೇರೆ ಯಾರಿದ್ದರೂ ಇದೇ ನಡೆಯುತ್ತಿತ್ತು.ತನ್ನ ತಪ್ಪುಗಳನ್ನು ಮರೆಮಾಚುವುದೇ ಸರ್ಕಾರದ ಗುರಿಯಾಗಿತ್ತು. ‘ಖಾನ್‌’ ಇದ್ದಿದ್ದರಿಂದ ನನ್ನ ವಿರುದ್ಧದ ಆರೋಪಗಳನ್ನು ತಿರುಚಲು ಕೆಲವರಿಗೆ ಅನುಕೂಲವಾಯಿತು’ ಎಂದರು.

ಆಹಾರ ತಜ್ಞ ಕೆ.ಸಿ.ರಘು,‘ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ, ರಾಜಸ್ಥಾನ ರೋಗಪೀಡಿತ ರಾಜ್ಯಗಳು. ಅಲ್ಲಿನ ಗ್ರಾಮೀಣ ಭಾಗದಲ್ಲಿ 50 ಸಾವಿರ ಜನರಿಗೆ ಒಬ್ಬರು ವೈದ್ಯರಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.