ADVERTISEMENT

ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ: ಕಣ್ಣೀರಿಟ್ಟ ಬಿಎಸ್‌ವೈ

‘ಮಂತ್ರಿ ಮಂಡಲ ರಚನೆಗೂ ಅವಕಾಶ ನೀಡಲಿಲ್ಲ l ಪ್ರವಾಹದ ವೇಳೆ ರಾಜ್ಯದಾದ್ಯಂತ ಹುಚ್ಚನಂತೆ ತಿರುಗಾಡಿದೆ’ l ಹಳೆಯ ದಿನಗಳ ಮೆಲುಕು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 19:40 IST
Last Updated 26 ಜುಲೈ 2021, 19:40 IST
ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸರ್ಕಾರದ ಎರಡನೇ ವರ್ಷದ ಆಚರಣೆಯ ನಂತರ ಬಿ.ಎಸ್‌. ಯಡಿಯೂರಪ್ಪ ಊಟ ಮಾಡಿದರು. ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್‌, ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ ಇದ್ದರು.
ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸರ್ಕಾರದ ಎರಡನೇ ವರ್ಷದ ಆಚರಣೆಯ ನಂತರ ಬಿ.ಎಸ್‌. ಯಡಿಯೂರಪ್ಪ ಊಟ ಮಾಡಿದರು. ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್‌, ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ ಇದ್ದರು.   

ಬೆಂಗಳೂರು: ‘ಕಣ್ಣುಗಳು ಕೆಂಪಗಾಗಿದ್ದವು. ಮುಖದಲ್ಲಿ ನಗುವಿನ ಸುಳಿವೇ ಇರಲಿಲ್ಲ. ತಮ್ಮ ಸುದೀರ್ಘ ರಾಜಕೀಯ ಜೀವನ ಯಾನದ ಒಂದೊಂದೇ ಘಟನೆ ನೆನಪುಗಳ ಪದರಗಳನ್ನು ಬಿಡಿಸುತ್ತಾ ಭಾವುಕರಾದರು, ಗದ್ಗದಿತರಾದರು, ಮನದಾಳದ ನೋವು ತಡೆಯಲಾಗದೇ ಕೊನೆಗೆ ಕಣ್ಣೀರು ಧುಮ್ಮಿಕ್ಕಿತು . . .’

ಇದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕೊನೆಯ ಮತ್ತು ವಿದಾಯದ ಭಾಷಣದ ಯಥಾವತ್ತು ದೃಶ್ಯ. ಎಂದಿನ ಗುಡುಗು–ಸಿಡಿಲಿನ ಅಬ್ಬರ ಇರಲಿಲ್ಲ, ಸೋನೆ ಮಳೆಯ ಬಾಷ್ಪದಂತಿತ್ತು.

ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸರ್ಕಾರದ ಎರಡನೇ ವರ್ಷದ ಆಚರಣೆ ನಡೆದರೂ, ಅಲ್ಲಿ ಸಂಭ್ರಮ ಮರೆಯಾಗಿತ್ತು. ಯಡಿಯೂರಪ್ಪ ತಮ್ಮ ರಾಜಕೀಯ ಜೀವನದ ನೋವು– ನಲಿವನ್ನು ರಾಜ್ಯದ ಜನರ ಮುಂದಿಟ್ಟರು. ಹಲವು ಸಲ ಕಣ್ಣಲ್ಲಿ ನೀರು ಜಿನುಗಿತು. ಕರವಸ್ತ್ರದಿಂದ ಒರೆಸಿಕೊಂಡರು. ಒಂದೆರಡು ಬಾರಿ ಮಾತೇ ಹೊರಡದಂತಾಗಿ, ಅವರು ತಡವರಿಸಿದರು.

ADVERTISEMENT

ಭಾಷಣದಲ್ಲಿ ಎರಡು ವರ್ಷಗಳ ಸಾಧನೆಗಳನ್ನೇನೂ ಪ್ರಸ್ತಾಪಿಸಲಿಲ್ಲ. ಆರಂಭದಲ್ಲೇ ವಿದಾಯದ ಸುಳಿವು ನೀಡಿದರು. ಆದರೆ, ರಾಜ್ಯದ
ಜನರಿಗೆ ಯಾವ ಸಂದೇಶ ನೀಡಬೇಕಿತ್ತೋ ಅದನ್ನು ಸ್ಪಷ್ಟವಾಗಿ ರವಾನಿಸಿದರು.

‘ಎರಡು ವರ್ಷವೂ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳು ಎದುರಿಸಿದೆ. ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರೂ ಸಂಪುಟ ವಿಸ್ತರಣೆಗೆ ವರಿಷ್ಠರು ಅವಕಾಶ ನೀಡಲಿಲ್ಲ. ಭೀಕರ ಪ್ರವಾಹ ಬಂದಿತ್ತು, ಒಬ್ಬನೇ ಹುಚ್ಚನಂತೆ ರಾಜ್ಯವಿಡೀ ತಿರುಗಾಡಿದೆ’ ಎಂದು ಯಡಿಯೂರಪ್ಪ ಭಾವುಕರಾದರು.

‘ಪ್ರವಾಹದ ಅಬ್ಬರ ಮುಗಿಯುತ್ತಿದ್ದಂತೆ ಕೋವಿಡ್‌ ಬಂದಿತು. ಒಂದೂವರೆ ವರ್ಷದಿಂದ ಅದರ ವಿರುದ್ಧ ಶಕ್ತಿ ಮೀರಿ ಹೋರಾಟ ಮಾಡಿದ್ದೇವೆ. ಇಡೀ ದೇಶದಲ್ಲಿ ಕೋವಿಡ್‌ ತಡೆಗಟ್ಟುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ ಎಂಬ ಮಾತನ್ನು ಕೇಂದ್ರ ಸರ್ಕಾರವೇ ಹೇಳಿತು. ಅಗ್ನಿ ಪರೀಕ್ಷೆಗಳ ಮಧ್ಯೆಯೂ ನಮ್ಮ ಇತಿ ಮಿತಿಯಲ್ಲಿ ರಾಜ್ಯದ ಜನರಿಗಾಗಿ ಕೆಲಸ ಮಾಡಿದ ತೃಪ್ತಿ ಇದೆ’ ಎಂದರು.

‘ಶಿಕಾರಿಪುರದಲ್ಲಿ ಆರಂಭದ ದಿನಗಳಲ್ಲಿ ಹೋರಾಟ ನಡೆಸಲು 50 ಜನರೂ ಸಿಗುತ್ತಿರಲಿಲ್ಲ. ಶಿವಮೊಗ್ಗ, ಶಿಕಾರಿಪುರ, ಬನವಾಸಿ ಹೀಗೆ ಎಲ್ಲ ಕಡೆ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ವಿಧಾನಸಭೆಯಲ್ಲಿ ನಾನು ಮತ್ತು ವಸಂತ ಬಂಗೇರ ಆಯ್ಕೆ ಆಗಿ ಬಂದಾಗ ಇದ್ದದ್ದು ಇಬ್ಬರೇ. ಬಂಗೇರ ಪಕ್ಷ ಬಿಟ್ಟರು. ಆದರೆ ನಾನು ಪಕ್ಷ ಬಿಡಲಿಲ್ಲ. ಬೇರೆ ಯಾವುದೇ ಯೋಚನೆ ಮಾಡದೇ ಒಬ್ಬನೇ ವಿಧಾನಸಭೆಯಲ್ಲಿ ಹೋರಾಟ ನಡೆಸಿಕೊಂಡು ಬಂದೆ’ ಎಂದು ನೆನಪಿನ ಸುರುಳಿ ಬಿಚ್ಚಿದರು.

‘ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದೆ ಎಂಬ ತೃಪ್ತಿ, ವಿಶ್ವಾಸ ಮತ್ತು ಸಮಾಧಾನ ನನಗಿದೆ. ಮಂಡ್ಯ ಜಿಲ್ಲೆ ಬೂಕನಕೆರೆಯಲ್ಲಿ ಹುಟ್ಟಿದರೂ ಶಿಕಾರಿಪುರಕ್ಕೆ ಹೋದೆ. ಆರ್‌ಎಸ್‌ಎಸ್‌ ಪ್ರಚಾರಕನಾಗಿ ಕೆಲಸ ಮಾಡಿದೆ. ಪುರಸಭೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದೆ. ಒಮ್ಮೆ ದಾರಿಯಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಬದುಕಿದರೆ, ಜನರ ಸೇವೆಗೆ ನನ್ನ ಜೀವನ ಮೀಸಲಿಡಬೇಕು ಎಂಬ ಭಾವನೆ ಬಂದಿತು. ಅದೇ ರೀತಿ ನಡೆದುಕೊಂಡೆ’ ಎಂದರು.

‘ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚನೆ ಆದಾಗ ಮಂತ್ರಿ ಆಗಲು ಬನ್ನಿ ಎಂದು ಆಹ್ವಾನ ನೀಡಿದರು.ನಾನು ದೆಹಲಿಗೆ ಬರುವುದಿಲ್ಲ, ಕರ್ನಾಟಕದಲ್ಲಿ ಪಕ್ಷ ಕಟ್ಟಲು ಬಿಡಿ ಎಂದು ಹೇಳಿದ್ದೆ’ ಎಂದು ಹೇಳುವಾಗ ಅವರಿಗೆ ದುಃಖ ಉಮ್ಮಳಿಸಿ ಬಂದಿತು.

‘ಬಿಜೆಪಿಯ ಆರಂಭದ ದಿನಗಳಲ್ಲಿ ಅಟಲ್ – ಆಡ್ವಾಣಿ ರಾಜ್ಯಕ್ಕೆ ಬಂದಾಗ 200 ರಿಂದ 300 ಜನ ಸೇರಿಸುವುದು ಕಷ್ಟ ಆಗುತ್ತಿತ್ತು. ಛಲ ಬಿಡದೇ ಅವರನ್ನು ಕರೆದುಕೊಂಡು ರಾಜ್ಯದ ಉದ್ದಗಲ ಓಡಾಟ ಮಾಡಿದೆ. ಕರ್ನಾಟಕದಲ್ಲಿ ಇಬ್ಬರು ಇದ್ದ ಶಾಸಕರು ನಾಲ್ಕು ಜನ ಆದರು. ಹೀಗೆ ನಾವೆಲ್ಲರೂ ಸೇರಿ ಪಕ್ಷವನ್ನು ಕಟ್ಟಿದೆವು. ಕರ್ನಾಟಕದಲ್ಲಿ ಅಧಿಕಾರ ಹಿಡಿದೆವು. ಹಣದ ಬಲ, ಹೆಂಡದ ಬಲ ಮತ್ತು ತೋಳ್ಬಲದ ವಿರುದ್ಧ ಹೋರಾಡಿದೆವು. ಜನನಮ್ಮ ಕೈಬಿಡಲಿಲ್ಲ. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಯಿತು’ ಎಂದು ಯಡಿಯೂರಪ್ಪ ಹೇಳಿದರು.

‘ನಮ್ಮಲ್ಲಿ ಕಾರು ಇಲ್ಲದ ಕಾಲದಲ್ಲಿ ಸೈಕಲ್‌ನಲ್ಲಿ ಓಡಾಡಿ ಪಕ್ಷವನ್ನು ಕಟ್ಟಿದೆವು. ಅವೆಲ್ಲ ನೆನಪಿಸಿಕೊಂಡರೆ ನಗು ಬರುತ್ತದೆ ಮತ್ತು ಆಶ್ಚರ್ಯವೂ ಆಗುತ್ತದೆ. ಇದೀಗ ದೇಶದ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ’ ಎಂದು ಹೇಳಿ ಮನತುಂಬಿ ಸಂತಸದಿಂದ ನಕ್ಕರು.

‘ಮೋದಿ–ಶಾ ವಾತ್ಸಲ್ಯವಿತ್ತು’

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ‍ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನನ್ನ ಮೇಲೆ ವಾತ್ಸಲ್ಯವಿದೆ. ಆದ ಕಾರಣ 75 ವರ್ಷ ಮೀರಿದ್ದರೂ 2 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ನೀಡಿದರು. ಅಬಾರಿಯನ್ನು ಶಬ್ದಗಳಲ್ಲಿ ಹೇಳಲು ಆಗಲ್ಲ, ಅದಕ್ಕಾಗಿ ಅವರಿಗೆ ಋಣಿಯಾಗಿದ್ದೇನೆ’ ಎಂದು ಹೇಳುತ್ತಾ ಮತ್ತೆ ಭಾವುಕರಾದರು.

ದೇಶದಲ್ಲಿ ಮತ್ತೆ ಮೋದಿ ಮತ್ತು ಶಾ ಜೋಡಿ ಗೆದ್ದು ಕೇಂದ್ರದಲ್ಲಿ ಮೂರನೇ ಬಾರಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ದೇಶವನ್ನು ಇನ್ನಷ್ಟು ಪ್ರಬಲಗೊಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

‘ಸಂತೋಷದಿಂದಲೇ ರಾಜೀನಾಮೆ’

ಭಾಷಣದ ಕೊನೆಯಲ್ಲಿ ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿದರು. ‘ಅನ್ಯಥಾ ಭಾವಿಸಬಾರದು. ನಾನು ತಮ್ಮೆಲ್ಲರ ಅಪ್ಪಣೆ ಪಡೆದು (ಗಂಟಲು ಕಟ್ಟಿ ತುಸು ಹೊತ್ತ ಮಾತು ನಿಲ್ಲಿಸಿದರು)... ತೀರ್ಮಾನಿಸಿದ್ದೇನೆ. ಎಲ್ಲರೂ ಊಟ ಮಾಡಿದ ನಂತರ ನಾನು ರಾಜಭವನಕ್ಕೆ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನ ಮಾಡಿದ್ದೇನೆ’ ಎನ್ನುವಾಗ ದುಃಖಿತರಾದರು, ಕಣ್ಣಲ್ಲಿ ಮತ್ತೊಮ್ಮೆ ನೀರು ಬಂದಿತ್ತು.

‘ದುಃಖದಿಂದ ಅಲ್ಲ, ಸಂತೋಷದಿಂದ– ಖುಷಿಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಇದಕ್ಕಾಗಿ ವರಿಷ್ಠರಿಗೆ ಆಬಾರಿಯಾಗಿದ್ದೇನೆ’ ಎಂದರು.

‘ಜನಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆ ಆಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ದೇಶ, ರಾಜ್ಯವನ್ನು ಮುಂದಕ್ಕೆ ಒಯ್ಯಬೇಕು ಎಂಬ ಅಪೇಕ್ಷೆ ಮೋದಿ ಅವರದ್ದಾಗಿದೆ’ ಎಂದರು.

‘ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ತೆರಿಗೆ ಸಂಗ್ರಹ ಸಂಪೂರ್ಣ ನಿಂತು ಹೋಯಿತು. ವ್ಯಾಪಾರ– ವಹಿವಾಟು ಬಂದ್‌ ಆಯಿತು. ಆದರೂ ಅಭಿವೃದ್ಧಿ ಕಾರ್ಯ ನಿಲ್ಲಲಿಲ್ಲ. ಸಾಕಷ್ಟು ಪ್ರಾಮಾಣಿಕ ಅಧಿಕಾರಿಗಳ ಪರಿಶ್ರಮದಿಂದ ಬೆಂಗಳೂರು ಮಾದರಿ ನಗರ ಮಾಡುವ ಪ್ರಯತ್ನ ನಡೆದಿದೆ’ ಎಂದರು.

ಬಿಎಸ್‌ವೈ ಅವರ ಕಡೇ ಘೋಷಣೆ

ಒಲಿಂಪಿಕ್‌ ಕ್ರೀಡೆಗಳಿಗೆ ರಾಜ್ಯದಿಂದ ಹೋಗಿರುವ ಕ್ರೀಡಾಪಟುಗಳು ಪದಕ ಗೆದ್ದರೆ ಸರ್ಕಾರ ವತಿಯಿಂದ ಬಹುಮಾನ ನೀಡುವುದಾಗಿ ಯಡಿಯೂರಪ್ಪ ಪ್ರಕಟಿಸಿದರು. ಚಿನ್ನದ ಪದಕ ಗೆದ್ದರೆ ₹ 5 ಕೋಟಿ, ಬೆಳ್ಳಿ ₹ 3 ಕೋಟಿ ಮತ್ತು ಕಂಚಿನ ಪದಕ ಗೆದ್ದರೆ ₹2 ಕೋಟಿ ಬಹುಮಾನ ನೀಡಲಾಗುವುದು. ಇತರ ರಾಜ್ಯದ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದರೆ ₹15 ಲಕ್ಷ, ಬೆಳ್ಳಿಗೆ ₹10 ಲಕ್ಷ ಮತ್ತು ಕಂಚಿನ ಪದಕ ಗೆದ್ದರೆ ₹5 ಲಕ್ಷ ನೀಡುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.