ADVERTISEMENT

28 ಕ್ಷೇತ್ರಗಳಲ್ಲಿಯೂ ಬಿಎಸ್‌ಪಿ ಸ್ವತಂತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:21 IST
Last Updated 14 ಮಾರ್ಚ್ 2019, 20:21 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಯಾವುದೇ ಪಕ್ಷದ ಜೊತೆ ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲ 28 ಕ್ಷೇತ್ರಗಳಲ್ಲಿಯೂ ಸ್ವತಂತ್ರವಾಗಿ ಸ್ಪರ್ಧಿಸಲಿದೆ’ ಎಂದು ಬಿಎಸ್‌ಪಿ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ದಾರ್ಥ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಏಪ್ರಿಲ್ 10ರಂದು ಮೈಸೂರಿನಲ್ಲಿ ನಡೆಯಲಿರುವ ಪಕ್ಷದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಭಾಗವಹಿಸಲಿದ್ದಾರೆ’ ಎಂದರು.

‘ಇಡೀ ದೇಶದಲ್ಲಿ ಬಿಎಎಸ್‌ಪಿ ಮೂರನೇ ಅತಿ ದೊಡ್ಡ ಪಕ್ಷ. ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್ ಇದೆ. ಹೀಗಾಗಿ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯ ಇಲ್ಲ’ ಎಂದರು.

ADVERTISEMENT

‘ಉತ್ತರ ಪ್ರದೇಶದಲ್ಲಿ ದಲಿತರು, ಮುಸ್ಲಿಮರು ಒಂದಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಒಂದಾಗಬೇಕು. ಹೀಗಾಗಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಮುಸ್ಲಿಮರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು’ ಎಂದರು.

ಶಾಸಕ ಎನ್. ಮಹೇಶ್ ಮಾತನಾಡಿ, ‘ಶೀಘ್ರದಲ್ಲಿಯೇ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಮಂಡ್ಯ ಕ್ಷೇತ್ರದಿಂದ ಹುತಾತ್ಮ ಯೋಧ ಗುರು‌ ಅವರ ಪತ್ನಿಯನ್ನು ಪಕ್ಷದಿಂದ ಕಣಕ್ಕಿಳಿಸುವ ಪ್ರಸ್ತಾಪ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯ ಸಂಚಾಲಕ ಶರಿಯತ್‌ ಖಾನ್ ಮಾತನಾಡಿ, ‘ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕುರಿತು ಧ್ವನಿಗೂಡಿಸಲು ಕಾಂಗ್ರೆಸ್ ವಿಫಲವಾಗಿದೆ. ಬಿಎಸ್‌ಪಿ ಮುಸ್ಲಿಂ ಪರ ಪಕ್ಷವಾಗಿದೆ. ಸಂಘಟನಾತ್ಮಕ ಚಟುವಟಿಕೆಯ ಜೊತೆಗೆ ಸಾಚಾರ್ ಕಮಿಟಿ ವರದಿ‌ ಜಾರಿಗೊಳಿಸಬೇಕೆಂಬ ಬೇಡಿಕೆ ಮುಂದಿಟ್ಟು ಪಕ್ಷ ಹೋರಾಟ ನಡೆಸಲಿದೆ’ ಎಂದರು.

ಬಿಎಸ್‌ಪಿ ರಾಜ್ಯ ಘಟಕ ಅಧ್ಯಕ್ಷ ಪ್ರೊ. ಹರಿರಾಮ್‌, ರಾಜ್ಯ ಉಸ್ತುವಾರಿ ಎಂ.ಎಲ್. ತೋಮರ್, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ಸಲ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.