ವಿಜಯಪುರ: ‘ಯಡಿಯೂರಪ್ಪ ಅವರು ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಬಿಜೆಪಿಯ ಮಾರ್ಗದರ್ಶನ ಸಮಿತಿಗೆ ಎಲ್ಲಿ ಸೇರಿಸಿಬಿಡುತ್ತಾರೋ ಎನ್ನುವ ಆತಂಕದಿಂದಾಗಿ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ’ ಎಂದು ಶಾಸಕ ಎಂ.ಬಿ.ಪಾಟೀಲ ವ್ಯಂಗ್ಯವಾಡಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗಿನದು ಅನೈತಿಕ ಸರ್ಕಾರ. ಅದರ ಆಯಸ್ಸು ಆರು ತಿಂಗಳಿನಿಂದ ಒಂದು ವರ್ಷ ಮಾತ್ರ’ ಎಂದು ಭವಿಷ್ಯ ನುಡಿದರು.
‘ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ. ಶಾಸಕರ ಅನರ್ಹತೆ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಲ್ಲಿ ಪಕ್ಷಾಂತರಿಗಳು ಪಾಠ ಕಲಿಯುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಆಪರೇಷನ್ ಕಮಲದಿಂದ ರಾಜ್ಯಕ್ಕೆ ಕಳಂಕ ಉಂಟಾಗಿದೆ. ಯಡಿಯೂರಪ್ಪ ಅವರೇ ಇದನ್ನು ಹುಟ್ಟು ಹಾಕಿದ್ದಾರೆ. ಇದರಿಂದಾಗಿ ರಾಜ್ಯದ ಘನತೆ ಮಣ್ಣು ಪಾಲಾಗಿದೆ. ಪಕ್ಷಾಂತರಕ್ಕೆ ಅಂತ್ಯವಿಲ್ಲ, ಇದು ಪ್ರಾರಂಭ. ಇದು ಬೇರೆ ರಾಜ್ಯದಲ್ಲೂ ನಡೆಯುತ್ತದೆ. ಆ ಮೇಲೆ ಇದಕ್ಕೆ ಕರ್ನಾಟಕ ಫಾರ್ಮುಲಾ ಎಂದು ಹೇಳುತ್ತಾರೆ’ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.