ADVERTISEMENT

ಬಜೆಟ್: ಸಿಟಿಜನರ ಪ್ರತಿಕ್ರಿಯೆಗಳು

Budget reactions

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:30 IST
Last Updated 8 ಫೆಬ್ರುವರಿ 2019, 19:30 IST
   

ಸಾರಥಿಯ ಸೂರು ಸ್ವಾಗತಾರ್ಹ

ಬೆಂಗಳೂರಿನ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ₹ 50 ಕೋಟಿ ವೆಚ್ಚದಲ್ಲಿ ‘ಸಾರಥಿಯ ಸೂರು’ ಬಾಡಿಗೆ ಆಧಾರದ ವಸತಿ ಯೋಜನೆ ಮಾಡಿರುವುದು ಸ್ವಾಗತಾರ್ಹ. ಆಟೋ ಚಾಲಕರಿಗೆ ಕಡಿಮೆ ಆದಾಯವಿರುತ್ತದೆ. ಬೆಂಗಳೂರಿನಂಥ ನಗರದಲ್ಲಿ ಮನೆ ಬಾಡಿಗೆಯೂ ಹೆಚ್ಚು. ಈಗ ಸರ್ಕಾರವೇ ಬಾಡಿಗೆ ಆಧಾರದ ವಸತಿ ಯೋಜನೆ ಮಾಡಿದ್ದು ಒಳ್ಳೆಯದಾಯಿತು. ಇದು ಆಟೋ ಚಾಲಕರು ಮತ್ತು ಅವರ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಯೋಜನೆ. ಇದೇ ಮೊದಲ ಬಾರಿಗೆ ಸರ್ಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬಗ್ಗೆ ಬಜೆಟ್‌ನಲ್ಲಿ ಯೋಜನೆ ರೂಪಿಸಿದೆ. ಇದಕ್ಕಾಗಿ ಕುಮಾರಣ್ಣಗೆ ಅಭಿನಂದನೆ.

–ಪುಟ್ಟಸ್ವಾಮಿ, ಆಟೋ ಚಾಲಕ, ಸುಂಕದಕಟ್ಟೆ

ADVERTISEMENT

***

ಸ್ಮಾರ್ಟ್ ಪಾರ್ಕಿಂಗ್ ಒಳ್ಳೆಯದು

ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಂಡಿರುವುದು ಒಳ್ಳೆಯದು. ಅಂತೆಯೇ 87 ರಸ್ತೆಗಳಲ್ಲಿ ಸುಮಾರು 10 ಸಾವಿರ ವಾಹನಗಳಿಗೆ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಮಾಡುತ್ತಿರುವುದು ಒಳ್ಳೆಯದು. ಇದರಿಂದ ಪೊಲೀಸರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ.

–ಸೌಮ್ಯಾ ಎಸ್.ಬಿ., ಟ್ರಾಫಿಕ್ ಮಹಿಳಾ ಪೇದೆ

***

5 ಲಕ್ಷ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸುವ ಬದಲು ಸೋಲಾರ್ ದೀಪಗಳನ್ನು ಅಳವಡಿಸಿದ್ದರೆ ಒಳ್ಳೆಯದಿತ್ತು. ಬ್ರಿಗೇಡ್ ರಸ್ತೆಯನ್ನು ಪಾದಚಾರಿ ರಸ್ತೆಯನ್ನಾಗಿ ಮಾಡಿದರೆ ಎಂ.ಜಿ.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಚೇರಿ ಇರುವವರಿಗೆ ತೊಂದರೆಯಾಗುತ್ತದೆ. ಇದಕ್ಕೆ ಪರ್ಯಾಯ ರೂಪಿಸಬೇಕಿತ್ತು. ಟ್ರಾಫಿಕ್ ಜಾಮ್ ತಪ್ಪಿಸಲು ಗೊರಗುಂಟೆ ಪಾಳ್ಯದಲ್ಲಿ ಅಂಡರ್ ಪಾಸ್‌ ಮಾಡಲು ಹೊರಟಿರುವುದು ಒಳ್ಳೆಯದು.

–ಪ್ರಭುಶೇಖರ್, ಖಾಸಗಿ ಇನ್ಷೂರೆನ್ಸ್ ಕಂಪನಿ ಉದ್ಯೋಗಿ

ತೃತೀಯಲಿಂಗಿಗಳ ಕಡೆಗಣನೆ

ಈ ಬಾರಿಯ ರಾಜ್ಯಬಜೆಟ್‌ನಲ್ಲಿ ತೃತೀಯ ಲಿಂಗಿಗಳನ್ನು ಕಡೆಗಣಿಸಲಾಗಿದೆ. ಆಟೋ–ಟ್ಯಾಕ್ಸಿ ಚಾಲಕರು, ಗಾರ್ಮೆಂಟ್ ನೌಕರರಿಗೆ ವಸತಿ ಯೋಜನೆ ಪ್ರಕಟಿಸಲಾಗಿದೆ. ಆದರೆ, ನಮ್ಮನ್ನೂ ಇದಕ್ಕೆ ಪರಿಗಣಿಸಬಹುದಿತ್ತು. ನಮಗೆ ಮನೆ ಬಾಡಿಗೆ ಕೊಡುವುದೇ ಕಷ್ಟ. ಬೆಂಗಳೂರಿನ ಹಲವು ಕಡೆ ಹಾಳಾದ ಕ್ವಾಟರ್ಸ್‌ಗಳಿವೆ. ಕನಿಷ್ಠ ಅವುಗಳನ್ನಾದರೂ ರಿಪೇರಿ ಮಾಡಿಸಿ ನಮಗೆ ನೀಡಬಹುದಿತ್ತು.

–ಸಮೀರಾ, ತೃತೀಯಲಿಂಗಿ, ಕೆ.ಆರ್.ಪುರಂ

***

ಸೌರ ವಿದ್ಯುತ್

ಘನತ್ಯಾಜ್ಯದಿಂದ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸುವ ಕೆಲಸ ಪರಿಸರ ಪೂರಕವಾಗಿದೆ. ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. ಇದಕ್ಕೆ ಪರಿಹಾರವಾಗಿ ಸ್ಮಾರ್ಟ್ ಪಾರ್ಕಿಂಗ್ ಮಾಡಿರುವುದು ಅನುಕೂಲಕರವಾಗಲಿದೆ. ನಗರದ ಮೂರು ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಸಾರ್ವಜನಿಕರಿಗೆ ಸಹಾಯವಾಗಲಿದೆ. ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ನಿಂದ ಹೆಚ್ಚಿನ ಬೆಳಕಿನ ಜತೆಗೆ ಬಾಳಿಕೆಯೂ ಬರುತ್ತದೆ.

–ಮಂಜುನಾಥ್, ಟೈಲರ್ ಅಂಗಡಿ ಮಾಲೀಕ, ಬಸವೇಶ್ವರ ನಗರ

ಗಾರ್ಮೆಂಟ್ಸ್ ನೌಕರರಿಗೆ ವಸತಿ

ರಾಜ್ಯದಲ್ಲಿ 40 ವರ್ಷಗಳಿಂದ ಗಾರ್ಮೆಂಟ್ ಉದ್ಯಮವಿದೆ. ಇದೇ ಮೊದಲ ಬಾರಿಗೆ ಗಾರ್ಮೆಂಟ್ಸ್ ನೌಕರರನ್ನು ಗುರುತಿಸಿ ಬಾಡಿಗೆ ಆಧಾರದಲ್ಲಿ ವಸತಿ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ವಸತಿಯ ಜತೆಗೆ ಸಾರಿಗೆ ಸೌಲಭ್ಯಕ್ಕೂ ಗಮನ ಹರಿಸಬೇಕಿತ್ತು. ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಶಿಶುಪಾಲನಾ ಗೃಹ, ಅಪಘಾತ ನಿರ್ವಹಣೆಗೆ ಸಹಾಯಧನ ಯಾವ ಸ್ವರೂಪದಲ್ಲಿ ಜಾರಿಗೆ ಬರಲಿದೆ ಅನ್ನುವುದು ಮುಖ್ಯ. ಅಂತೆಯೇ ಪರಿಶಿಷ್ಟ ಜಾತಿ, ಪಂಗಡದ ಮಹಿಳೆಯರಿಗೆ ಕೌಶಲ ತರಬೇತಿ ಉನ್ನತೀಕರಣ ಯೋಜನೆ ಅರ್ಹರಿಗೆ ತಲುಪುವಂತಾಗಬೇಕು.

–ಪ್ರತಿಭಾ, ಗಾರ್ಮೆಂಟ್ಸ್ ನೌಕರರ ಹೋರಾಟಗಾರ್ತಿ

ಕಾರ್ಮೋಡದ ಬಜೆಟ್

ಕುಮಾರಸ್ವಾಮಿ ಅವರ ಈ ಬಜೆಟ್ ಕಾರ್ಮೋಡದ ಬಜೆಟ್. ಇನ್ನೇನು ಮಳೆ ಬರುತ್ತೆ, ಒಳ್ಳೆಯ ಬೆಳೆ ಆಗುತ್ತೆ ಅಂತ ನಿರೀಕ್ಷೆಯಲ್ಲಿದ್ದವರಿಗೆ ಈ ಬಜೆಟ್ ನಿರಾಶೆ ಮೂಡಿಸಿತು.

–ಕೆ.ಎಂ.ಮುನಿಯಪ್ಪ, ವ್ಯಾಪಾರಿ, ಕನಕಪಾಳ್ಯ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.