ADVERTISEMENT

ನಟ ದರ್ಶನ್‌ಗೆ ಕಾಯುತ್ತಿದೆ 'ಬಸವ'

ಕಾಲು ಮುರಿದುಕೊಂಡು ನರಳುತ್ತಿರುವ ಮೂಕ‍ಪ್ರಾಣಿ

​ಪ್ರಜಾವಾಣಿ ವಾರ್ತೆ
Published 1 ಮೇ 2020, 21:13 IST
Last Updated 1 ಮೇ 2020, 21:13 IST
ಕಾಲಿಗೆ ಏಟು ಮಾಡಿಕೊಂಡು ದೇವಾಲಯದ ಮುಂಭಾಗ ಮಲಗಿರುವ ಬಸವ
ಕಾಲಿಗೆ ಏಟು ಮಾಡಿಕೊಂಡು ದೇವಾಲಯದ ಮುಂಭಾಗ ಮಲಗಿರುವ ಬಸವ   

ಸಾಲಿಗ್ರಾಮ (ಮೈಸೂರು): ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವ (ಗೂಳಿ) ಕಾಲಿಗೆ ಆಗಿರುವ ಗಾಯದಿಂದ ನರಳುತ್ತ ಗ್ರಾಮದ ಕಾಳಮ್ಮನ ದೇಗುಲದ ಮುಂಭಾಗ ನರಳುತ್ತಿರುವುದು ಸ್ಥಳೀಯರ ಕರುಳು ಹಿಂಡುತ್ತಿದೆ.

ಬಸವ ಹಲವು ವರ್ಷಗಳಿಂದ ಇಲ್ಲಿ ಬೀಡು ಬಿಟ್ಟಿದೆ. ಗ್ರಾಮಸ್ದರ ಪಾಲಿಗೆ ದೇವರಂತಿದೆ. ಮೂರು ದಿನಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ತನ್ನ ಕಾಲು ಮುರಿದುಕೊಂಡಿದೆ.

ದರ್ಶನ್‌ಗೂ ಬಸವನಿಗೂ ನಂಟು!: ಈ ಬಸವನಿಗೂ ನಟ ದರ್ಶನ್‌ ತೂಗುದೀಪ ಅವರಿಗೂ ನಂಟಿರುವುದು ವಿಶೇಷ. ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸುಮಲತಾ ಪರ ದರ್ಶನ್‌ ಪ್ರಚಾರ ಕೈಗೊಂಡಿದ್ದರು.

ADVERTISEMENT

ಆಗ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಬಸವ ರಸ್ತೆ ಮಧ್ಯೆ ನಿಂತು ಗುಟುರು ಹಾಕಿತ್ತು. ಬಸವನಿಗೆ ಹೆದರಿದ್ದ ಜನರು ಓಡಿದ್ದರು. ಇದನ್ನು ಕಂಡ ದರ್ಶನ್‌, ಬಸವನ ಬಳಿ ತೆರಳಿ ಮೈ ಸವರಿ ಸಮಾಧಾನಪಡಿಸಿದ್ದು, ಶಾಂತವಾಗಿತ್ತು.

ಸದ್ಯ, ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರೂ, ಸ್ಪಂದಿಸುತ್ತಿಲ್ಲ. ದರ್ಶನ್‌ ಬಂದರೆ ಬಸವ ಸ್ಪಂದಿಸುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆ.ಅವರು ಗ್ರಾಮಕ್ಕೆ ಬರಬೇಕು. ಅದರ ಜೀವದ ಹೊಣೆ ಅವರ ಮೇಲಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಬಸವನ ಆರೋಗ್ಯದಲ್ಲಿ ಚೇತರಿಕೆ ಕಾಣಲು ದರ್ಶನ್‌ ಬರಬೇಕು. ಆಗಲೇ, ಗ್ರಾಮಸ್ಥರಿಗೂ ನೆಮ್ಮದಿ‘ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.