ADVERTISEMENT

ಬಸ್‌ ಪ್ರಯಾಣ ದರ ಏರಿಕೆ ವಾರದಲ್ಲಿ ನಿರ್ಧಾರ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:56 IST
Last Updated 5 ಜನವರಿ 2019, 19:56 IST
   

ಹುಬ್ಬಳ್ಳಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಏರಿಕೆ ಸಂಬಂಧ ಇನ್ನೊಂದು ವಾರದಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

‘ಎಲ್ಲ ಸಾರಿಗೆ ಸಂಸ್ಥೆಗಳೂ ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಹೀಗಾಗಿ ಪ್ರಯಾಣ ದರ ಹೆಚ್ಚಿಸಬೇಕೆಂಬ ಬೇಡಿಕೆ ಇದೆ’ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಈ ಹಿಂದೆ ತೈಲ ಬೆಲೆ ಏರಿಕೆಯಾದಾಗ ಅವುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಲಾಗಿತ್ತು. ಈಗ ತೈಲ ಬೆಲೆ ಕಡಿಮೆಯಾಗಿರುವುದರಿಂದ ಏರಿಸಲಾಗಿದೆ. ಇಷ್ಟಾದರೂ ರಾಜ್ಯದಲ್ಲಿನ ತೆರಿಗೆ ಪ್ರಮಾಣ ದೇಶದಲ್ಲಿಯೇ ಕಡಿಮೆ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ADVERTISEMENT

‘ಸಾಲ ಮನ್ನಾಕ್ಕಾಗಿ ಯಾವುದೇ ಇಲಾಖೆಯ ಹಣವನ್ನು ಬಳಸಿಕೊಂಡಿಲ್ಲ. ಅದಕ್ಕಾಗಿಯೇ ₹9,000 ಕೋಟಿ ತೆಗೆದಿರಿಸಲಾಗಿದೆ’ ಎಂದು ಅವರು ಹೇಳಿದರು.

‘ಬಸವರಾಜ ಹೊರಟ್ಟಿ ಅವರು ನಮ್ಮೊಂದಿಗೆ ಇದ್ದಾರೆ. ಅವರನ್ನು ಬಿಟ್ಟು ರಾಜಕೀಯ ಮಾಡಲಿಕ್ಕೆ ಆಗುತ್ತಾ? ಅವರಿಗೆ ಏನು ಜವಾಬ್ದಾರಿ ಕೊಡಬೇಕು ಎಂಬುದು ಗೊತ್ತಿದೆ. ನಿಗಮ, ಮಂಡಳಿ ನೇಮಕ ವಿಷಯ ಸೋಮವಾರ ಬಗೆಹರಿಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.