ಬೆಳಗಾವಿ: ಈ ಬಾರಿ ಗಣೇಶೋತ್ಸವ ಅಂಗವಾಗಿ ಸಾರ್ವಜನಿಕವಾಗಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೋವಿಡ್–19 ಸೋಂಕು ಹರಡುವುದನ್ನು ನಿಯಂತ್ರಿಸುವ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಸರಳವಾಗಿ ಹಬ್ಬ ಆಚರಿಸಬೇಕು. ಮಹಾಮಂಡಳಗಳು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶದಲ್ಲಿ ತಿಳಿಸಿದ್ದಾರೆ.
ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾರ್ಗಸೂಚಿಗಳು
* ಉತ್ಸವ ಆಚರಿಸಲು ಸಂಬಂಧಿಸಿದ ಇಲಾಖೆ ಮತ್ತು ಪ್ರಾಧಿಕಾರಗಳಿಂದ ಅನುಮತಿ ಪಡೆಯಬೇಕು.
* ಪಟಾಕಿ ಸಿಡಿಸುವಂತಿಲ್ಲ, ಬಣ್ಣ ಎರಚಾಡುವಂತಿಲ್ಲ, ಲೌಡ್ ಸ್ಪೀಕರ್ ಬಳಸುವಂತಿಲ್ಲ.
* ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿ 2 ಅಡಿ (ಪೀಠ ಸಹಿತ) ಹಾಗೂ ದೇವಸ್ಥಾನಗಳಲ್ಲಿ 4 ಅಡಿ (ಪೀಠಸಹಿತ) ಮೀರುವಂತಿಲ್ಲ. ಪಿಇಪಿ ಬಳಸದೆ ಮಣ್ಣಿನ ತಯಾರಿಸಿದ ಮೂರ್ತಿಗಳನ್ನಷ್ಟೇ ಕಡ್ಡಾಯವಾಗಿ ಪ್ರತಿಷ್ಠಾಪಿಸಬೇಕು.
* ಕೋವಿಡ್–19 ಸೋಂಕಿನ ಜಾಗೃತಿ ಮೂಡಿಸಬೇಕು.
* ಆರತಿ ಸಮಯದಲ್ಲಿ ಗರಿಷ್ಠ 5 ಜನರಿಗಷ್ಟೆ ಅವಕಾಶ.
* ಗಣೇಶ ದರ್ಶನ ಸೌಲಭ್ಯವನ್ನು ಆನ್ಲೈನ್ನಲ್ಲೇ ಕಲ್ಪಿಸಬೇಕು.
* ದೇವಸ್ಥಾನಗಳಲ್ಲಿ ನಿತ್ಯ ಸ್ಯಾನಿಟೈಸ್ ಮಾಡಬೇಕು. ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಅಂತರ ಕಾಯ್ದುಕೊಳ್ಳಬೇಕು.
* ಮೂರ್ತಿ ತರುವಾಗ ಅಥವಾ ವಿಸರ್ಜನೆ ಕಾಲಕ್ಕೆ ಮೆರವಣಿಗೆ ನಡೆಸುವಂತಿಲ್ಲ. ಮೂರ್ತಿಗಳ ವಿಸರ್ಜನೆ ಏಕ ಕಾಲಕ್ಕೆ ಮಾಡಬಾರದು.
* ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವ್ಯವಸ್ಥೆ ಮಾಡಲಾಗುವ ಮೊಬೈಲ್ ಟ್ಯಾಂಕ್ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.