ಬೆಂಗಳೂರು: ಎಂಜಿನಿಯುರಿಂಗ್ ಮತ್ತು ಮೆಡಿಕಲ್ ಕೋರ್ಸ್ಗಳ ಆಯ್ಕೆಗೆ ಸಂಬಂಧಿಸಿ ಈಗಾಗಲೇ ದಾಖಲೆಗಳ ಪರಿಶೀಲನೆ ಮುಗಿಯುವ ಹಂತಕ್ಕೆ ಬಂದಿದ್ದು, ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾಗಿದೆ. ನೀಟ್ ರ್ಯಾಂಕಿಂಗ್ ಆಧಾರದಲ್ಲಿ ನಾಲ್ಕು ದಿನದೊಳಗೆ ಸೀಟ್ ಮ್ಯಾಟ್ರಿಕ್ಸ್ ನಿಗದಿಯಾಗಬಹುದು. ಕಳೆದ ವರ್ಷದ ಕಟಾಫ್ ಅನಲೈಸರ್ ನೋಡಿದರೆ ಅಭ್ಯರ್ಥಿಗಳ ಹಲವು ಗೊಂದಲಗಳಿಗೆ ಪರಿಹಾರ ನಿಶ್ಚಿತ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಆರ್.ಗಿರೀಶ್ ಹೇಳಿದರು.
‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ನಡೆದ ಫೋನ್ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಹಲವಾರು ಮಂದಿ ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.
kea.kar.nic.in ವೆಬ್ಸೈಟ್ನಲ್ಲಿ ಕಟಾಫ್ ಅನಲೈಸರ್ ನೀಡಲಾಗಿದೆ. ಕಳೆದ ವರ್ಷ ಎಂಜಿನಿಯರಿಂಗ್ ಕಾಲೇಜಿನಲ್ಲಿ ಯಾವ ವಿಭಾಗಕ್ಕೆ ಎಷ್ಟು ರ್ಯಾಂಕ್ ಕಟಾಫ್ ಆಗಿತ್ತು ಎಂಬ ಮಾಹಿತಿ ಇದೆ. ಇದು ಈ ವರ್ಷದ ಮಾಹಿತಿ ಅಲ್ಲವಾದರೂ, ಬಹುತೇಕ ಇಷ್ಟೇ ಪ್ರಮಾಣದಲ್ಲಿ ಕಟಾಫ್ ಇರುತ್ತದೆ. ಹೀಗಾಗಿ ಅನಲೈಸರ್ ಅನ್ನು ಗಮನಿಸಿದರೆ ಹಲವು ಗೊಂದಲಗಳಿಗೆ ಪರಿಹಾರ ಸಿಗಬಹುದು ಎಂದರು.
ಕೃಷಿ ಬಿಎಸ್ಸಿಯಲ್ಲಿ ರೆಗ್ಯಲರ್, ಪ್ರಾಕ್ಟಿಕಲ್ ಪರೀಕ್ಷೆ ತೆಗೆದುಕೊಂಡವರು ಹೇಗೆ ಕೌನ್ಸೆಲಿಂಗ್ಗೆ ಹಾಜರಾಗಬೇಕು, ವೈದ್ಯಕೀಯ ಪ್ರವೇಶಕ್ಕೆ ಎಂಬಿಬಿಎಸ್–ಆಯುಷ್ ವಿಭಾಗ ಎರಡಕ್ಕೂ ಪ್ರವೇಶ ಪಡೆಯಲು ಅವಕಾಶ ಇದೆಯೇ? ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆದ ಬಳಿಕ ಸಿಇಟಿ ಮೂಲಕ ವೃತ್ತಿಪರ ಕೋರ್ಸ್ಗಳಿಗೆ ಹೇಗೆ ಪ್ರವೇಶ ಪಡೆಯಬೇಕು ಸಹಿತ ಹಲವಾರು ವಿಷಯಗಳ ಬಗ್ಗೆ ಪ್ರಶ್ನೆಗಳು ಕೇಳಿಬಂದವು.
ಆರ್.ಗಿರೀಶ್ ಅವರು ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ಪ್ರಾಧಿಕಾರದ ಸಲಹೆಗಾರ ಎಸ್.ಎನ್.ಗಂಗಾಧರಯ್ಯ ಹಾಗೂ ಶ್ರೀನಾಥ್ ಅವರು ಪೂರಕ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.