ADVERTISEMENT

ಚೆಂಡೆವಾದಕ ಕೃಷ್ಣ ಯಾಜಿ ನಿಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 16:53 IST
Last Updated 24 ಏಪ್ರಿಲ್ 2020, 16:53 IST
ಕೃಷ್ಣ ಯಾಜಿ
ಕೃಷ್ಣ ಯಾಜಿ   

ಕಾರವಾರ: ಯಕ್ಷಗಾನದ ಪ್ರಸಿದ್ಧ ಚೆಂಡೆ ವಾದಕ ಕೃಷ್ಣಯಾಜಿ (7‌4) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಹೊನ್ನಾವರ ತಾಲ್ಲೂಕಿನಮಾವಿನಕೆರೆಯ ತಮ್ಮ ನಿವಾಸದಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಸುಮಾರು 50 ವರ್ಷಗಳಿಂದ ಯಕ್ಷಗಾನ ಲೋಕಕ್ಕೆ ಕಲಾ ಸೇವೆ ನೀಡುತ್ತಿದ್ದ ಅವರು, ಚೆಂಡೆಗೇತಾರಾಮೌಲ್ಯವನ್ನು ತಂದುಕೊಟ್ಟಿದ್ದರು. ಒಂದೇ ಬಾರಿಗೆ ಆರೇಳು ಚೆಂಡೆಗಳನ್ನು ಸಾಲಾಗಿ ಇರಿಸಿಕೊಂಡು ನುಡಿಸುವುದರಲ್ಲೂಪ್ರಸಿದ್ಧರಾಗಿದ್ದರು. ತಮ್ಮ ಆತ್ಮೀಯರ ವಲಯದಲ್ಲಿಕುಟ್ಟು ಯಾಜಿ ಎಂದೇ ಪರಿಚಿತರಾಗಿದ್ದರು.

ಅವರು ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮುಲ್ಕಿ, ಗುಂಡಬಾಳ ಮೇಳಗಳಲ್ಲಿ ಚೆಂಡೆವಾದಕರಾಗಿದ್ದರು. ಆರಂಭದಲ್ಲಿ‍ಪಾತ್ರಧಾರಿಯಾಗಿದ್ದಕೃಷ್ಣ ಯಾಜಿ, ಕೋಡಂಗಿ, ಬಾಲಗೋಪಾಲ, ಸುಬ್ರಹ್ಮಣ್ಯ, ಅರ್ಜುನ, ಅಭಿಮನ್ಯು, ಚಂದ್ರಹಾಸ ಮುಂತಾದ ವಿವಿಧ ಪಾತ್ರಗಳಿಗೆ ಅವರು ಬಣ್ಣ ಹಚ್ಚಿದ್ದರು. ಬಳಿಕ ಕಿನ್ನೀರು ನಾರಾಯಣ ಹೆಗ್ಡೆ ಅವರಿಂದ ಮದ್ದಲೆ ವಾದನದಲ್ಲಿ ತರಬೇತಿ ಪಡೆದರು. ಗುಂಡ್ಮಿ ರಾಮಚಂದ್ರ ನಾವಡ ಅವರ ಬಳಿ ಮದ್ದಲೆ ಹಾಗೂ ಚೆಂಡೆ ವಾದನ ಕಲಿತರು.

ADVERTISEMENT

ಯಕ್ಷಗಾನಕ್ಕೆ ಸೀಮಿತವಾಗಿರುವ ಚೆಂಡೆಯನ್ನು ನಾಟಕಗಳಲ್ಲೂ ಪ್ರಯೋಗಿಸಿ ಯಶಸ್ವಿಯಾಗಿದ್ದರು.ದೇಶ ವಿದೇಶಗಳಲ್ಲಿ ಯಕ್ಷಗಾನದ ಚೆಂಡೆಯ ನಾದವನ್ನು ಪಸರಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. 10 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದಲ್ಲಿ ತರಬೇತಿಯನ್ನೂ ನೀಡುತ್ತಿದ್ದರು.

ಹತ್ತಾರು ಪ್ರಶಸ್ತಿಗಳು:ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ, ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮುಂತಾದ ಗೌರವಗಳಿಗೂ ಅವರು ಪಾತ್ರರಾಗಿದ್ದರು.

ಅವರ ಅಂತ್ಯಕ್ರಿಯೆಯು ಮಾವಿನಕೆರೆಯಲ್ಲಿ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.