ಮಂಡ್ಯ: ನಗರದ ರಾಜ್ಕುಮಾರ್ ಬಡಾವಣೆ, ಮನೆಯ 2ನೇ ಮಹಡಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವೊಂದು ಕಾಲು ಜಾರಿ ಕೆಳಗೆ ಬಿದ್ದು ಮಂಗಳವಾರ ಮೃತಪಟ್ಟಿದೆ.
ಸತೀಶ್ ಹಾಗೂ ಶ್ರುತಿ ದಂಪತಿಯ ಮಗಳು ಧನುಶ್ರೀ ಮೃತಪಟ್ಟ ಮಗು. ತಾಯಿ ಶ್ರುತಿ ಮಗುವನ್ನು ಆಟವಾಡಿಸುತ್ತಾ ಕೈತುತ್ತು ನೀಡುತ್ತಿದ್ದರು. ಊಟ ತಿನ್ನಿಸಿದ ನಂತರ ಶ್ರುತಿ ಮಗುವನ್ನು ಅಲ್ಲಿಯೇ ಬಿಟ್ಟು ಕೈತೊಳೆದುಕೊಳ್ಳಲು ಮನೆಯೊಳಗೆ ತೆರಳಿದ್ದಾರೆ. ಈ ವೇಳೆ, ಆಟವಾಡುತ್ತಿದ್ದ ಮಗು ಇಣುಕಿ ನೋಡಲು ಯತ್ನಿಸಿ ಕಾಲು ಜಾರಿ ಕೆಳಗೆ ಬಿದ್ದಿದೆ.
ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಗೆ ತೀವ್ರ ಪೆಟ್ಟಾಗಿದೆ. ಗಾಯಗೊಂಡ ಮಗುವನ್ನು ತಕ್ಷಣ ಪೋಷಕರು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನಂತರ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದ ಮಗು ಮೃತಪಟ್ಟಿದೆ.
ಘಟನೆಯ ನಂತರ ಜಿಲ್ಲಾಸ್ಪತ್ರೆ ಸೇರಿ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಪೋಷಕರು ಸುತ್ತಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಮಗುವಿನ ಪ್ರಾಣ ಉಳಿಸಬಹುದಾಗಿತ್ತು ಎಂದು ಮಗುವಿನ ಸಂಬಂಧಿಕರು ತಿಳಿಸಿದರು.
ಪುಟಾಣಿ ಮಗುವನ್ನು ಕಳೆದುಕೊಂಡ ಪೋಷಕರು, ಕುಟುಂಬ ಸದಸ್ಯರ ಗೋಳು ಮುಗಿಲು ಮುಟ್ಟಿತ್ತು. ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದ ಮಗುವಿನ ಮೃತದೇಹ ಕಂಡ ಜನರ ಕಣ್ಣಾಲಿಗಳು ತುಂಬಿ ಬಂದವು. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.