ADVERTISEMENT

‘ಹೆಣ್ಣಿನ ದನಿ ದಮನ ಸಲ್ಲ’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:26 IST
Last Updated 28 ಅಕ್ಟೋಬರ್ 2018, 20:26 IST

ಬೆಳಗಾವಿ: ‘ಮಹಿಳೆಯರುತಮಗಾದ ಅನ್ಯಾಯ ಹಾಗೂ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೊಳ್ಳಲುಮೀ ಟೂ ಅಭಿಯಾನ ಉತ್ತಮ ವೇದಿಕೆಯಾಗಿದೆ. ಇದಕ್ಕೆ ನನ್ನ ಬೆಂಬಲವಿದೆ’ ಎಂದು ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಯಾವ ಮಹಿಳೆಯೂ ಪ್ರಚಾರಕ್ಕಾಗಿ ತನ್ನ ಮಾನದ ಕುರಿತು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ತಮಗಾದ ಅನ್ಯಾಯದ ಬಗ್ಗೆ ತಿಳಿಸಿದ, ಆರೋಪಿಸಿದ ಮಹಿಳೆಯರ ಮೇಲೆಯೇ ಪ್ರತ್ಯಾರೋಪ ಮಾಡಿ, ಗೂಬೆ ಕೂರಿಸುತ್ತಿರುವುದು ಎಷ್ಟು ಸರಿ?’ ಎಂದು ಕೇಳಿದರು.

‘ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದನಿ ಕೇಳಿಸದಂತೆ ಮಾಡಲಾಗಿದೆ. ಹೆಣ್ಣುಮಕ್ಕಳು ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮುಂದೆ ಬಂದರೆ, ಅವರನ್ನೇ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿದೆ. ಅನ್ಯಾಯ ಹೇಳಿಕೊಳ್ಳುವ ಮಹಿಳೆಯರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ತಮ್ಮ ವಿರುದ್ಧ ದೂರಿದ ಚಿತ್ರ ನಟಿ ಸಂಜನಾ ವಿರುದ್ಧ ಚಲನಚಿತ್ರ ನಿರ್ದೇಶಕ ರವಿ ಶ್ರೀವತ್ಸ ಹಗುರವಾಗಿ ಮಾತನಾಡಿದ್ದಾರೆ. ಹೆಣ್ಣಿಗೇ ಅಷ್ಟಿರಬೇಕಾದರೆ, ಗಂಡಸಾದ ನನಗೆ ಎಷ್ಟಿರಬೇಕು? ಎಂದು ಬಹಿರಂಗ
ವಾಗಿ ಪ್ರಶ್ನಿಸಿರುವುದು ಪುರುಷ ಪ್ರಧಾನ ಸಮಾಜದ ಮನಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಶಬರಿಮಲೆ ಪ್ರವೇಶಕ್ಕೆ ನಿಷೇಧ ಸರಿಯಲ್ಲ: ‘ಋತುಚಕ್ರ ಎನ್ನುವುದು ನೈಸರ್ಗಿಕ ಕ್ರಿಯೆಯಾಗಿದೆ. ಈ ಕಾರಣದಿಂದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸುವುದು ಖಂಡನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.