ADVERTISEMENT

ಕಲ್ಲಿದ್ದಲು ದಾಸ್ತಾನು ಕೊರತೆ: ರಾಹುಲ್‌ ಗಾಂಧಿ, ಪ್ರಲ್ಹಾದ ಜೋಶಿ ಟ್ವೀಟ್‌ ಸಮರ

ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 1:02 IST
Last Updated 21 ಏಪ್ರಿಲ್ 2022, 1:02 IST
   

ನವದೆಹಲಿ: ದೇಶದಲ್ಲಿನ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ತಲೆದೋರಿರುವ ಕಲ್ಲಿದ್ದಲು ದಾಸ್ತಾನು ಕೊರತೆ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರ ನಡುವೆ ಬುಧವಾರ ಟ್ವೀಟ್‌ ಸಮರ ನಡೆದಿದೆ.

ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಖಾಲಿಯಾಗುತ್ತಿರುವ ಬಗ್ಗೆ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘8 ವರ್ಷಗಳ ದೊಡ್ಡ ಮಾತುಗಳ ಫಲಿತಾಂಶದ ಪರಿಣಾಮ ದೇಶ ಕೇವಲ 8 ದಿನಗಳ ಕಲ್ಲಿದ್ದಲು ದಾಸ್ತಾನು ಇದೆ. ಮೋದಿ ಜೀ, ದಿಗ್ಭ್ರಮೆ ಮೂಡಿಸುತ್ತಿದೆ’ ಎಂದು ಟೀಕಿಸಿ ಟ್ವೀಟ್‌ ಮಾಡಿದ್ದಾರೆ.

‘ವಿದ್ಯುತ್ ಕಡಿತವು ಸಣ್ಣ ಕೈಗಾರಿಕೆಗಳನ್ನು ಪುಡಿಗಟ್ಟುತ್ತದೆ. ಹೆಚ್ಚಿನ ಉದ್ಯೋಗ ನಷ್ಟಕ್ಕೂ ಕಾರಣವಾಗುತ್ತದೆ. ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ ಮತ್ತು ವಿದ್ಯುತ್ ಸ್ಥಾವರಗಳನ್ನು ಆನ್ ಮಾಡಿ!’ ಎಂದು ರಾಹುಲ್ ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ADVERTISEMENT

‘ಕಾಂಗ್ರೆಸ್‌ ಪಕ್ಷದ ವಿಷಯಗಳನ್ನು ಹೊರತುಪಡಿಸಿ ಎಲ್ಲ ವಿಷಯಗಳಲ್ಲೂ ರಾಹುಲ್‌ ಗಾಂಧಿಯವರು ಸ್ವಯಂ
ಘೋಷಿತ ಪರಿಣಿತರು. ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವವರು ಕಲ್ಲಿದ್ದಲು ಉತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟ್ವೀಟ್‌ನಲ್ಲೇ, ಎದಿರೇಟು ನೀಡಿದ್ದಾರೆ.

‘ಮಿಸ್ಟರ್‌ ನಕಲಿ ಗಾಂಧಿ, ಭಯ ಹುಟ್ಟಿಸುವುದನ್ನು ನಿಲ್ಲಿಸಿ, ಬದಲಾಗಿ, ತನ್ನದೇ ಪಕ್ಷದ ಭವಿಷ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ’ ಎಂದುರಾಹುಲ್ ವಿರುದ್ಧ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.