ಬೆಂಗಳೂರು: ಮೆಗಾಸಿಟಿ ಡೆವಲಪರ್ಸ್ ಕಂಪನಿಯ ಗ್ರಾಹಕರಿಗೆ ವಂಚಿಸಿರುವ ಪ್ರಕರಣದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಕ್ರಮ ಜರುಗಿಸಿ, ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಮೆಗಾಸಿಟಿ ನಿವೇಶನ ಸದಸ್ಯರ ಹಿತರಕ್ಷಣಾ ಸಂಘದ ಅಧ್ಯಕ್ಷ ರವೀಂದ್ರ ಬೆಲೆಯೂರು ಸಿಐಡಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
‘1995–2000ದ ಅವಧಿಯಲ್ಲಿ 9,000 ಜನರಿಂದ ₹ 70 ಕೋಟಿ ಸಂಗ್ರಹಿಸಿ ವಂಚಿಸಿರುವ ಆರೋಪ ಮೆಗಾಸಿಟಿ ಡೆವಲಪರ್ಸ್ ಮೇಲಿದೆ. 25 ವರ್ಷಗಳಾದರೂ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ದೊರಕಿಲ್ಲ. ಕೇಂದ್ರ ಸರ್ಕಾರದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿ (ಎಸ್ಎಫ್ಐಒ) ಮತ್ತು ರಾಜ್ಯದ ಸಿಐಡಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದರೂ, ಗ್ರಾಹಕರಿಗೆ ನ್ಯಾಯ ಲಭಿಸಿಲ್ಲ’ ಎಂದು ಮೇ 31ರಂದು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗ್ರಾಹಕರ ವೇದಿಕೆಗಳ ಆದೇಶದಂತೆ 69 ಮಂದಿಗೆ ಪಾವತಿಸಬೇಕಿದ್ದ ₹ 4.86 ಕೋಟಿಯನ್ನು 2006ರಿಂದಲೂ ನೀಡಿಲ್ಲ. ಹೂಡಿಕೆದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆಯ ಅಡಿಯಲ್ಲೂ ಕ್ರಮ ಜರುಗಿಸಿಲ್ಲ. ಕಂಪನಿಯ ಸಂಸ್ಥಾಪಕರಾದ ಸಚಿವ ಯೋಗೇಶ್ವರ್ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಕ್ಷಣ ಮಧ್ಯ ಪ್ರವೇಶಿಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಯೋಗೇಶ್ವರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.