ADVERTISEMENT

ಶತ್ರುವಿನಂತೆ ಕಂಡು ದ್ವೇಷ ಸಾಧಿಸಿದರು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:00 IST
Last Updated 25 ಆಗಸ್ಟ್ 2019, 20:00 IST
   

ಮೈಸೂರು: ‘ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ನೋಡಿದ್ದೇ ಸಮಸ್ಯೆಗೆ ಮೂಲ ಕಾರಣ. ವಿಶ್ವಾಸದಿಂದ ಕಂಡು, ಸ್ನೇಹಿತನಂತೆ ಭಾವಿಸಿದ್ದರೆ ಏನೂ ಆಗುತ್ತಿರಲಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನನ್ನು ವೈರಿ ಅಂದುಕೊಂಡು ದ್ವೇಷ ಸಾಧಿಸುತ್ತಲೇ ಬಂದರು. ಮೈತ್ರಿ ಪಕ್ಷದ ನಾಯಕನಂತೆಯೂ ಕಾಣಲಿಲ್ಲ’ ಎಂದರು.

ಕ್ಲರ್ಕ್‌ ರೀತಿ ನಡೆಸಿಕೊಂಡರು ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ, ‘ಅಧಿಕಾರ ನಡೆಸಲು ಬಾರದವರು ಹೀಗೆಯೇ ಹೇಳುವುದು. ಅದಕ್ಕೆ ನಾವೇನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

ಸಿದ್ದರಾಮಯ್ಯ ಟೀಕಿಸಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

‘ಸಿದ್ದರಾಮಯ್ಯ ಅವರು ನನ್ನ ಮೊದಲ ಶತ್ರು’ ಎಂದು ಎಲ್ಲೂ ಟೀಕೆ ಮಾಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

‘ಸಿದ್ದರಾಮಯ್ಯ ನನ್ನ ಮೊದಲ ಶತ್ರು. ನಾನು ಮುಖ್ಯಮಂತ್ರಿ ಆಗಿದ್ದನ್ನು ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ತಮ್ಮ ಆಪ್ತ ಶಾಸಕರ ಮೂಲಕ ಮೈತ್ರಿ ಸರ್ಕಾರ ಬೀಳಿಸಿದರು’ ಎಂಬ ಹೇಳಿಕೆಗಳು ಕೆಲ ಟಿ.ವಿ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೆ ಕೆಲ ದಿನಗಳ ಹಿಂದೆ ನೀಡಿದ ಸಂದರ್ಶನವನ್ನು ಈಗ ಕೆಲವು ವಿದ್ಯುನ್ಮಾನ ಮಾಧ್ಯಮಗಳು ತಿರುಚಿವೆ. ‘ಸಿದ್ದರಾಮಯ್ಯ ಅವರು ಚುನಾವಣೆಗೆ ಮುನ್ನ ಬಿಜೆಪಿಗಿಂತ ಜೆಡಿಎಸ್‌ಅನ್ನು ಹೆಚ್ಚು ಟೀಕಿಸುತ್ತಿದ್ದರು’ ಎಂದು ಹೇಳಿದ್ದೆ. ಈ ಹೇಳಿಕೆಯನ್ನೇ ತಮಗೆ ಬೇಕಾದಂತೆ ಬಳಸಿಕೊಂಡಿವೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.