ಬೆಂಗಳೂರು: ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೈಬಿಟ್ಟಿದ್ದರು ಎನ್ನಲಾದ ವಿಚಾರ ಮತ್ತು ಬಿಡಿಎ ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತಿತರರ ವಿರುದ್ಧದ ಎಫ್ಐಆರ್ ಕುರಿತಂತೆ ವಿಜಯೇಂದ್ರ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುವ ಯತ್ನ ನಡೆದಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿದೆ.
ಸಿಎಂ ಹುದ್ದೆಯೂ ಕೊಡಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲ. ಈಗ ರಾಷ್ಟ್ರಪತಿ ಕಾರ್ಯಕ್ರಮದಲ್ಲೂ ಹೆಸರಿಲ್ಲ. ಬಿಎಸ್ವೈ ನಂತರ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ ಮುಗಿಸಿ ಹಾಕುತ್ತಿದೆ. ಉದ್ದೇಶಪೂರ್ವಕವಾಗಿ ಜಗದೀಶ್ ಶೆಟ್ಟರ್ ಹೆಸರು ಕೈಬಿಡುವ ಮೂಲಕ ಬಿಜೆಪಿ ಲಿಂಗಾಯತ ವಿರೋಧಿ ಧೋರಣೆ ಅನಾವರಣಗೊಳಿಸಿದೆ ಅಲ್ಲವೇ ಸುಧಾಕರ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಶೆಟ್ಟರ್ ಅವರ ಕ್ಷೇತ್ರದಲ್ಲೇ ರಾಷ್ಟ್ರಪತಿ ಕಾರ್ಯಕ್ರಮ. ಅವರೇ ಅಲ್ಲಿನ ಶಾಸಕರು. ಬಿಎಸ್ವೈ ನಂತರ ಬಿಜೆಪಿಯ ದೊಡ್ಡ ಲಿಂಗಾಯತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು ಕೂಡ. ಹೀಗಿದ್ದೂ ಜಗದೀಶ್ ಶೆಟ್ಟರ್ ಹೆಸರು ಕೈಬಿಡಲಾಗಿದೆ. ಬಿಜೆಪಿಯಲ್ಲಿ ಲಿಂಗಾಯತ ವಿರೋಧಿ ಧೋರಣೆ ಅದೆಷ್ಟು ಆಳ, ಅಗಲಕ್ಕೆ ಬೇರು ಬಿಟ್ಟಿದೆ ಎಂದು ಊಹಿಸಬಹುದು ಎಂದಿರುವ ಕಾಂಗ್ರೆಸ್, #BJPvsBJP ಎಂದು ಹ್ಯಾಷ್ಟ್ಯಾಗ್ ಹಾಕಿದೆ.
ಮೊದಲು ಬಿಎಸ್ವೈ, ಈಗ ಜಗದೀಶ್ ಶೆಟ್ಟರ್. ಬಿಜೆಪಿಯ 'ಸಂತೋಷ ಕೂಟ' ಹಂತ ಹಂತವಾಗಿ ಬಿಜೆಪಿಯಲ್ಲಿನ ಲಿಂಗಾಯತ ನಾಯಕರನ್ನು ಮುಗಿಸುತ್ತಿದೆ ಎಂದು ಟ್ವೀಟ್ ಹಾಕಲಾಗಿದೆ. ಬಿಜೆಪಿ ಪಕ್ಷದಲ್ಲಿ 'ಟಾರ್ಗೆಟ್ ಲಿಂಗಾಯತ' ಎಂಬ ಆಪರೇಷನ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ತನ್ನ ಸ್ವಂತ ಕ್ಷೇತ್ರದ ಕಾರ್ಯಕ್ರಮದಲ್ಲೇ ಜಾಗ ಸಿಗದೆ ಅನಾಥರಾದ ಶೆಟ್ಟರ್ ಅವರ ಸ್ಥಿತಿ ಯಾರಿಗೂ ಬರಬಾರದು! ಎಂದು ವ್ಯಂಗ್ಯ ಮಾಡಲಾಗಿದೆ.
ಇದೇವೇಳೆ, ಯಡಿಯೂರಪ್ಪರನ್ನು ಮುಗಿಸಲು ಕುತಂತ್ರ ನಡೆದಿದೆ. ಒಳಗಿನವರೋ ಹೊರಗಿನವರೋ ಹೆಳಲ್ಲ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಯ ಸುದ್ದಿಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು, ಯಡಿಯೂರಪ್ಪನವರನ್ನು ಮುಗಿಸಲು ಹೊರಟಿರುವ ಸಂತೋಷ ಕೂಟಕ್ಕೆ ಹೇಳಿರುವ ಮಾತಲ್ಲವೇ ಇದು ಎಂದು ಪ್ರಶ್ನಿಸಿದೆ.
ವಿಜಯೇಂದ್ರ ಅವರ ಈ ಆಕ್ರೋಶ ಯಾವುದಕ್ಕೆ? ಬಿಎಸ್ವೈ ಅಧಿಕಾರ ಕಿತ್ತಿದ್ದಕ್ಕಾ? ತಮಗೆ ಟಿಕೆಟ್ ಸಿಗದಿದ್ದಕ್ಕಾ? ಮಂತ್ರಿ ಮಾಡದಿರುವುದಕ್ಕಾ? ಜೈಲಿಗೆ ಹೋಗಬಹುದೆಂಬ ಭಯಕ್ಕಾ?
ಎಂದು ಪ್ರಶ್ನೆ ಎತ್ತಿದೆ.
ಚಿಂತೆ ಇಲ್ಲದವರಿಗೆ ಸಂತೆಯಲ್ಲಿ ನಿದ್ದೆ, ಚಿಂತನೆ ಇಲ್ಲದವರಿಗೆ ವೇದಿಕೆಯಲ್ಲೇ ನಿದ್ದೆ! ಎಂದು ನಳಿನ್ ಕುಮಾರ್ ಕಟೀಲ್ ವೇದಿಕೆಯಲ್ಲೇ ನಿದ್ದೆ ಮಾಡುತ್ತಿರವ ವಿಡಿಯೊ ಟ್ವೀಟ್ ಮಾಡಿರುವ ಕಾಂಗ್ರೆಸ್, ನಳಿನ್ ಅವರೇ, ಸುಳ್ಯದಲ್ಲಿ ಕಾರು ಅಲ್ಲಾಡಿಸಿದಂತೆ ಇಲ್ಲಿ ನಿಮ್ಮ ಕಾರ್ಯಕರ್ತರು ವೇದಿಕೆ ಅಲ್ಲಾಡಿಸುವ ಮುನ್ನ ಎಚ್ಚರಾಗಿಬಿಡಿ! ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಪ್ರತಿರಾತ್ರಿ ಬಿಟ್ ಕಾಯಿನ್ ಕನಸು ಬೀಳುವುದರಿಂದ ನಿದ್ದೆ ಬರುವುದಿಲ್ಲವೋ ಏನೋ! ಬಿಜೆಪಿ ವೈಫಲ್ಯಗಳನ್ನು ಪ್ರಶ್ನಿಸಿದರೆ ಧರ್ಮದ ಹೆಸರಲ್ಲಿ ರಕ್ಷಣೆ ಪಡೆಯುತ್ತದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಜಾತಿಯ ಹೆಸರಲ್ಲಿ ರಕ್ಷಣೆ ಪಡೆಯುತ್ತದೆ ಎಂದು ಕಾಂಗ್ರೆಸ್ ಕುಟುಕಿದೆ.
ನೂರೆಂಟು ಹಗರಣ, ನೂರೆಂಟು ವೈಫಲ್ಯ, 108 ಸ್ಥಗಿತದಿಂದ ಸಾವು ಸಂಭವಿಸುತ್ತಿವೆ. ಇದು ಬರೀ ಸಾವಲ್ಲ, ಸರ್ಕಾರಿ ಕೊಲೆ.
ಈ ಸಾವಿಗೆ ಸುಧಾಕರ್ ಅವರೇ ನೇರ ಹೊಣೆ. #ResignSudakar ಎಂದು ಹ್ಯಾಷ್ಟ್ಯಾಗ್ ಕೊಡಲಾಗಿದೆ.
ವಿಧಾನಸೌಧದಲ್ಲಿ 40% ಕಮಿಷನ್ನಿಗಾಗಿ ಬೋರ್ಡ್ ಹಾಕಿಕೊಂಡವರು ಸರ್ಕಾರಿ ಕಚೇರಿಗಳಿಗೆ 'ಲಂಚ ಸ್ವೀಕರಿಸುವುದಿಲ್ಲ' ಎಂಬ ಬೋರ್ಡ್ ಹಾಕಲು ಹೇಳಿದ್ದು ಹಾಸ್ಯಾಸ್ಪದ! ಬೊಮ್ಮಾಯಿ ಅವರೇ,
'ಲಂಚ ನಮಗೆ ಮಾತ್ರ ಇರಲಿ, ನೀವು ಪಡೆಯಬೇಡಿ' ಎಂಬ ಸಂದೇಶವೇ ಇದು? ತಾಕತ್ತಿದ್ದರೆ ಸಚಿವರ ಕಚೇರಿಗಳಲ್ಲಿ '40% ಸ್ವೀಕರಿಸುವುದಿಲ್ಲ' ಎಂಬ ಬೋರ್ಡ್ ಹಾಕಿ ತೋರಿಸಿ. ಲಂಚ ಸ್ವೀಕರಿಸದ ಬೋರ್ಡ್ ಕಚೇರಿಗಳಿಗೆ ಮಾತ್ರ ಸೀಮಿತವೇ? ಭ್ರಷ್ಟಾಚಾರವೇ ಇಲ್ಲ ಎನ್ನುತ್ತಿದ್ದ ಬಿಜೆಪಿಗೆ ಬೋರ್ಡ್ ಹಾಕುವ ಪ್ರಮೇಯ ಬಂದಿದ್ದೇಕೆ? ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದಲ್ಲವೇ ಬಿಜೆಪಿ? ಎಂದು ಕಾಂಗ್ರೆಸ್ ಕುಟುಕಿದೆ.
ಸಾಚಾಗಳಾಗಿದ್ದರೆ "40% ಕಮಿಷನ್ ತಿನ್ನುವುದಿಲ್ಲ" ಎಂಬ ಬೋರ್ಡನ್ನು ಸಚಿವರು ತಮ್ಮ ಕೊರಳಿಗೆ ನೇತುಹಾಕಿಕೊಂಡು ತಿರುಗಲಿ ಎಂದು ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.