ADVERTISEMENT

ಕಾಂಗ್ರೆಸ್‌ ಚಾಲಕರ ಘಟಕ ಆರಂಭ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 21:12 IST
Last Updated 6 ಆಗಸ್ಟ್ 2021, 21:12 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ವಾಹನ ಚಾಲಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ನೀಡಲು ಮತ್ತು ಅವರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಚಾಲಕರ ಘಟಕ ಆರಂಭಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಆಟೊ, ಟ್ಯಾಕ್ಸಿ, ಓಲಾ, ಉಬರ್‌, ಬಸ್‌, ಲಾರಿ ಸೇರಿದಂತೆ ವಿವಿಧ ಚಾಲಕರ ಸಂಘಟನೆಗಳ ಪದಾಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಅವರು, ‘ರಾಜ್ಯದಲ್ಲಿ 41 ಲಕ್ಷ ಜನರು ಚಾಲಕ ವೃತ್ತಿಯಲ್ಲಿ ದುಡಿಯುತ್ತಿದ್ದಾರೆ. ಅವರಲ್ಲಿ 25 ಲಕ್ಷ ಜನರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಆದರೆ, ಕೇವಲ 8.25 ಲಕ್ಷ ಮಂದಿ ಚಾಲಕರು ಇದ್ದಾರೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದರು.

ಪ್ರದೇಶ ಕಾಂಗ್ರೆಸ್ ಸಮಿತಿಯ ಅಡಿಯಲ್ಲಿ ಚಾಲಕರ ಘಟಕ ಆರಂಭಿಸುವಂತೆ ಹಿರಿಯ ನಾಯಕರಾದ ಆಸ್ಕರ್‌ ಫರ್ನಾಂಡಿಸ್‌ ಸಲಹೆ ನೀಡಿದ್ದರು. ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳ ಚಾಲಕರನ್ನೂ ಒಳಗೊಂಡ ನೂತನ ಚಾಲಕರ ಘಟಕ ಆರಂಭಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 100 ಮಂದಿ ಚಾಲಕರನ್ನು ಸದಸ್ಯರನ್ನಾಗಿ ನೋಂದಣಿ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

‘ಚಾಲಕ ವೃತ್ತಿಯಲ್ಲಿ ಇರುವವರು ಧರ್ಮ, ಜಾತಿಯ ತಾರತಮ್ಯ ಇಲ್ಲದೇ ಸಮಾಜಕ್ಕಾಗಿ ದುಡಿಯುತ್ತಾರೆ. ಚಾಲಕರ ನೋವುಗಳಿಗೆ ಧ್ವನಿಯಾಗುವುದು ನಮ್ಮ ಉದ್ದೇಶ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.