ಬೆಂಗಳೂರು: ಹೈಕೋರ್ಟ್ನ ಕ್ರಿಮಿನಲ್ ಮತ್ತು ಬೋರ್ಡ್ ಬ್ರ್ಯಾಂಚ್ಗಳಲ್ಲಿ ಭ್ರಷ್ಟಾಚಾರ ವ್ಯಾಪಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.
ಹೈಕೋರ್ಟ್ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ವಕೀಲರ ಸಭಾಂಗಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ 16 ನಿರ್ಣಯಗಳನ್ನು ಸ್ವೀಕರಿಸಲಾಗಿದೆ.
‘ನಮ್ಮ ಈ ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು 10 ದಿನಗಳ ಒಳಗೆ ಪರಿಗಣಿಸಬೇಕು. ಇಲ್ಲವಾದರೆ ಕೋರ್ಟ್ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಣಯಗಳು
* ಕ್ರಿಮಿನಲ್ ಸ್ಕ್ರುಟಿನಿ ಮತ್ತು ಬೋರ್ಡ್ ಬ್ರ್ಯಾಂಚ್ನ ಸಿಬ್ಬಂದಿಯನ್ನು ಆರು ತಿಂಗಳಿಗೊಮ್ಮೆ ವರ್ಗಾವಣೆ ಮಾಡಬೇಕು.
* ಈ ವಿಭಾಗಗಳಿಗೆ ಕಾನೂನು ಪದವಿ ಅಥವಾ ಕಾನೂನು ಪರಿಜ್ಞಾನ ಹೊಂದಿದ ಸಿಬ್ಬಂದಿಯನ್ನು ನಿಯೋಜಿಸಬೇಕು.
* ಹೈಕೋರ್ಟ್ ಪ್ರಕರಣಗಳ ಕಾಸ್ ಲಿಸ್ಟ್ ಅನ್ನು ಪ್ರತಿದಿನ ಸಂಜೆ 7 ಗಂಟೆಯೊಳಗೆ ಅಪ್ಲೋಡ್ ಮಾಡಬೇಕು.
* ರಾಜ್ಯ ಗ್ರಾಹಕರ ಆಯೋಗ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
* ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಅಧ್ಯಕ್ಷ ನ್ಯಾಯಮೂರ್ತಿ ಭಕ್ತವತ್ಸಲ ವಕೀಲರ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ.
* ತುರ್ತು ಪ್ರಕರಣಗಳನ್ನು ನ್ಯಾಯಪೀಠದ ಮುಂದೆ ಪೋಸ್ಟ್ ಮಾಡಿಸಲು ಈ ಹಿಂದೆ ಡೆಪ್ಯುಟಿ ರಿಜಿಸ್ಟ್ರಾರ್ ಅವರಿಗೆ ಮೆಮೊ ಸಲ್ಲಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು.
* ಕ್ರಿಮಿನಲ್ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಹಾಗೂ ರೆಗ್ಯುಲರ್ ಜಾಮೀನು ಅರ್ಜಿಗಳ ವಿಲೇವಾರಿಗೆ ಪ್ರತ್ಯೇಕವಾದ ಹೆಚ್ಚುವರಿ ನ್ಯಾಯಪೀಠ ಸ್ಥಾಪಿಸಬೇಕು. ಕ್ರಿಮಿನಲ್ ಪ್ರಕರಣಗಳನ್ನು ತೀರ್ಮಾನಿಸಲು ವಾರದ ಐದು ದಿನಗಳಲ್ಲಿ ಮಧ್ಯಾಹ್ನದ ಕಲಾಪದ ನಂತರ ಐದು ನ್ಯಾಯಪೀಠಗಳು ಕಾರ್ಯ ನಿರ್ವಹಿಸುವಂತಾಗಬೇಕು.
**
ನ್ಯಾಯಮೂರ್ತಿಗಳ ವಿರುದ್ಧ ಅತೃಪ್ತಿ
‘ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ ಶಾಸ್ತ್ರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರು ತಮ್ಮ ಕೋರ್ಟ್ ಹಾಲ್ಗಳಲ್ಲಿ ವಕೀಲರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ’ ಎಂದೂ ವಕೀಲರ ಸಭೆ ಅತೃಪ್ತಿ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.