ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕ ಪ್ರಕ್ರಿಯೆ ವೇಳೆ ಅರ್ಜಿ ಭರ್ತಿಯಲ್ಲಿ ಆಗಿದ್ದ ಲೋಪದಿಂದ ಸರ್ಕಾರಿ ಉದ್ಯೋಗ ಕಳೆದುಕೊಳ್ಳಲಿದ್ದ ಅಭ್ಯರ್ಥಿಯೊಬ್ಬರ ಮನವಿಗೆ ಹೈಕೋರ್ಟ್ ಸ್ಪಂದಿಸಿದೆ.
ಈ ಸಂಬಂಧ ಎನ್.ಹೇಮಂತ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯಲ್ಲಿ ಪರಿಶಿಷ್ಟ ಜಾತಿಯ ಬದಲಿಗೆ ಪರಿಶಿಷ್ಟ ಪಂಗಡವೆಂದು ಉಲ್ಲೇಖಿಸಿದ್ದನ್ನು ತಿದ್ದುಪಡಿ ಮಾಡಿ ಆಯ್ಕೆಗೆ ಪರಿಗಣಿಸುವಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೆಪಿಎಸ್ಸಿಗೆ ಆದೇಶಿಸಿದೆ.
‘ಈ ರೀತಿ ಒಬ್ಬ ಅಭ್ಯರ್ಥಿಯ ಲೋಪ ಸರಿಪಡಿಸಲು ಅವಕಾಶ ನೀಡಿದರೆ ಭವಿಷ್ಯದಲ್ಲಿ ಇದೇ ದೃಷ್ಟಾಂತವಾಗಿ ಬೇರೆಯವರೂ ಇಂತಹ ಅವಕಾಶವನ್ನು ಕೋರಲು ಆರಂಬಿಸುತ್ತಾರೆ’ ಎಂಬ ಕೆಪಿಎಸ್ಸಿ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.
‘ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಯ ಅಹವಾಲು ಆಲಿಸದೆ ಕೋರ್ಟ್ ಕಿವುಡನಾಗಲು ಸಾಧ್ಯ
ವಿಲ್ಲ. ಮಾನವ ದೋಷ ಸಹಜ. ಅಭ್ಯರ್ಥಿಯೂ ಪ್ರಮಾದ ಎಸಗಿದ್ದಾರೆ. ಆದರೆ, ಇದನ್ನೇ ಮುಂದಿಟ್ಟುಕೊಂಡು ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗದು’ ಎಂದು ನ್ಯಾಯಪೀಠ ಹೇಳಿದೆ.
‘ಆಯೋಗವು ಅರ್ಜಿದಾರರು ಸಲ್ಲಿಸಿದ ಮನವಿಯನ್ನು ಪರಿಗ
ಣಿಸಿ ಜಾತಿಯನ್ನು ತಿದ್ದುಪಡಿ ಮಾಡಬಹು
ದಿತ್ತು. ಆದರೆ, ಸರಿಪಡಿಸದೇ ಇದ್ದುದು ವ್ಯಾಜ್ಯಕ್ಕೆ ಕಾರಣವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.