ಶಿರಸಿ: ಮಹಾರಾಷ್ಟ್ರದ ಮುಂಬೈನಿಂದ ಶುಕ್ರವಾರ ಊರಿಗೆ ಬಂದ ವೃದ್ಧರೊಬ್ಬರು ಮನೆಯ ಆವರಣ ಪ್ರವೇಶಿಸುವುದನ್ನು ಕಂಡ ಅವರ
ಮಗ, ಮುನ್ನೆಚ್ಚರಿಕೆಯಾಗಿ ಅಪ್ಪನ ಬಳಿ ತೋಟಕ್ಕೆ ಹೋಗಿ ನಿಲ್ಲುವಂತೆ ಸೂಚಿಸಿದ್ದ.
ತಾಲ್ಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ಕೆಲ ತಿಂಗಳುಗಳ ಹಿಂದೆ ಉದ್ಯೋಗಕ್ಕಾಗಿ ಠಾಣೆಗೆ ಹೋಗಿದ್ದರು. ರೈಲಿನಲ್ಲಿ ಹೊರಟು, ಬೆಂಗಳೂರು ಮಾರ್ಗವಾಗಿ ತಮ್ಮ ಊರಿಗೆ ಹಿಂದಿರುಗಿದ್ದರು. ತಂದೆ ಬಂದಿರುವ ವಿಷಯವನ್ನು ಸ್ಥಳೀಯ ಗ್ರಾಮ ಪಂಚಾಯ್ತಿಗೆ ತಿಳಿಸಿದರು. ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಪಿಡಿಒ ರವಿರಾಜ್, ಪೊಲೀಸರು, ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.
ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಒಯ್ಯಲು ಆಂಬುಲೆನ್ಸ್ ಬರುವುದು ವಿಳಂಬವಾಯಿತು. ಹೀಗಾಗಿ, ಮಗನೇ ತನ್ನ ಕಾರಿನಲ್ಲಿ ಅಪ್ಪನನ್ನು ಕ್ವಾರಂಟೈನ್ ಕೇಂದ್ರಕ್ಕೆ ಬಿಟ್ಟುಬಂದರು. ತಂದೆ, ಮಗನ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ‘ಈ ವೃದ್ಧ ಎಲ್ಲ ಚೆಕ್ಪೋಸ್ಟ್ಗಳನ್ನು ತಪ್ಪಿಸಿಕೊಂಡು, ಶಿವಮೊಗ್ಗ ಮಾರ್ಗವಾಗಿ ಶಿರಸಿ ತಲುಪಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.