ಬೆಂಗಳೂರು: ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್ಐ) ಮತ್ತು ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಮನೆ ಮನೆ ಸಮೀಕ್ಷೆಯನ್ನು ಇದೇ 29ರಿಂದ 2022ರ ಜ.15ರವರೆಗೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಬಗ್ಗೆ ಇಲಾಖೆಯ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ‘ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐಎಲ್ಐ, ಸಾರಿ ಪ್ರಕರಣಗಳ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಸಮೀಕ್ಷೆಯ ವರದಿಯನ್ನು ಉಪ ಕೇಂದ್ರಗಳ ಮಟ್ಟದಲ್ಲಿ ಐಎಚ್ಐಪಿ ತಂತ್ರಾಂಶದ ಎಸ್ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.
ನಾಲ್ಕು ಗಂಟೆ ಅವಧಿ: ಕೋವ್ಯಾಕ್ಸಿನ್ ಲಸಿಕೆಯ ಬಳಕೆ ಅವಧಿ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಸುತ್ತೋಲೆ ಹೊರಡಿಸಿದ್ದಾರೆ.
‘ಸೀಶೆಯ ಮುಚ್ಚಳ ತೆರೆದ ಬಳಿಕ28 ದಿನಗಳ ವರೆಗೆ ಲಸಿಕೆ ವಿತರಿಸುವ ಬಗ್ಗೆ ಆಸ್ಪತ್ರೆಗಳು ಸ್ಪಷ್ಟೀಕರಣ ಕೇಳಿವೆ. ಲಸಿಕೆಯ ಸೀಶೆಯ ಮೇಲೆ ನಮೂದಿಸಿರುವ ಅವಧಿಯವರೆಗೆ ಮಾತ್ರ ಉಪಯೋಗಿಸಬೇಕು. ಒಂದು ಬಾರಿ ಮುಚ್ಚಳ ತೆಗೆದ ಬಳಿಕ 4 ಗಂಟೆಯೊಳಗೆ ವಿತರಿಸಬೇಕು’ ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.