ಬೆಂಗಳೂರು: ‘ಕೋವಿಡ್ ಕಾರಣಕ್ಕೆ ಯಾವ ಮಗುವಿನ ಶಿಕ್ಷಣವೂ ಅಪೂರ್ಣ ಆಗಬಾರದು. ಹೀಗಾಗಿ, 15ರಿಂದ 18 ವರ್ಷ ವಯೋಮಾನದ ಎಲ್ಲ ಮಕ್ಕಳಿಗೆ ಸೋಮವಾರದಿಂದ (ಜ. 3) ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿದ್ದಾರೆ.
ಕೋವಿಡ್ ದೃಢಪಟ್ಟ ಕಾರಣ ಕ್ವಾರಂಟೈನ್ನಲ್ಲಿರುವ ಸಚಿವರು, ವಿಡಿಯೊ ಸಂದೇಶದ ಮೂಲಕ ಈ ಮನವಿ ಮಾಡಿದ್ದಾರೆ.
‘ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಎಲ್ಲ ಪೋಷಕರು ಪೂರ್ಣ ರೀತಿಯಲ್ಲಿ ಸಹಕಾರ ನೀಡಬೇಕು. ಲಸಿಕೆ ತೆಗೆದುಕೊಂಡ ನಂತರವೂ ಎಲ್ಲರೂ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ, ಕೋವಿಡ್ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಪಾಲಿಸಲೇಬೇಕು. ಆ ಮೂಲಕ, ಮೂರನೇ ಅಲೆ ಬಾರದಂತೆ ತಡೆಯಬೇಕು’ ಎಂದಿದ್ದಾರೆ.
‘ಕೋವಿಡ್ ಜೊತೆ ಜೀವನ ಮಾಡುವುದು ಅನಿವಾರ್ಯವಾಗಿದೆ. ಆದರೂ, ಕೋವಿಡ್ ಎದುರಿಸಲು ಎಲ್ಲರಿಗೂ ಉಚಿತ ಲಸಿಕೆ ನೀಡುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಈಗಾಗಲೇ 145 ಕೋಟಿಗೂ ಹೆಚ್ಚು ಜನರಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಇಂದಿನಿಂದ (ಜ. 3) ದಿನದಿಂದ 15ರಿಂದ 18 ವರ್ಷದ ಮಕ್ಕಳಿಗೆ ಉಚಿತ ಲಸಿಕೆ ಕೊಡಲಾಗುತ್ತಿದೆ. ಈ ಪ್ರಕ್ರಿಯೆಗೆ ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು’ ಎಂದೂ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.