ಬೆಂಗಳೂರು: ರಾಜ್ಯ ಯೋಜನೆಗಳನ್ನು ವಿಕೋಪ ನಿರ್ವಹಣಾ ಕಾಯ್ದೆಯ ಪ್ರಕಾರ ಪರಿಷ್ಕರಿಸಲು ಉಪಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಪರಿಷ್ಕೃತ ಯೋಜನೆಯು ಕೋವಿಡ್ ಹರಡುವುದನ್ನು ತಡೆಯಲು ದೀರ್ಘಕಾಲೀನ ಕ್ರಮಗಳನ್ನು ಒಳಗೊಂಡಿರಬೇಕು’ ಎಂದು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತು.
ವಿಕೋಪ ನಿರ್ವಹಣಾ ಕಾಯ್ದೆ ಅನುಷ್ಠಾನ ಕುರಿತು ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು. ‘2020–21ನೇ ವರ್ಷ ಆರಂಭಕ್ಕೂ ಮುನ್ನ ಈ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ರಾಜ್ಯ ಕಾರ್ಯಕಾರಿ ಸಮಿತಿ ಈ ವಿಷಯದಲ್ಲಿ ವಿಫಲವಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.
‘ರಾಜ್ಯ ಮತ್ತು ಜಿಲ್ಲಾ ಯೋಜನೆಗಳ ಹೊರತಾಗಿಯೂ ಎಲ್ಲಾ ಇಲಾಖೆಗಳೂ ವಿಕೋಪ ನಿರ್ವಹಣೆಗಾಗಿಯೇ ಪ್ರತ್ಯೇಕ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರಗಳ ಬಹುತೇಕ ಸದಸ್ಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮೊದಲನೇ ಸಾಲಿನಲ್ಲೇ ಇದ್ದಾರೆ. ಆದರೂ ರಾಜ್ಯ ಸಮಿತಿ ಅಸಹಾಯಕ ಅಲ್ಲ. ಉಪಸಮಿತಿಗಳನ್ನು ರಚಿಸಿ ಯೋಜನೆ ಪರಿಷ್ಕರಿಸಬೇಕು’ ಎಂದು ಪೀಠ ಆದೇಶಿಸಿತು.
‘ಉಪಸಮಿತಿ ರಚನೆ ಮಾಡಿರುವ ಕುರಿತ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸಬೇಕು. ಎಲ್ಲಾ ಜಿಲ್ಲೆಗಳು ಮತ್ತು ಎಲ್ಲಾ ಇಲಾಖೆಗಳೂ ಯೋಜನೆ ಸಿದ್ಧಪಡಿಸಿಕೊಳ್ಳಲು ನಿರ್ದೇಶನ ನೀಡಬೇಕು’ ಎಂದು ಪೀಠ ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.