ಹಾವೇರಿ: ‘ಅರ್ಹರಲ್ಲದವರು ಕಾರ್ಮಿಕರ ಕಾರ್ಡ್ ಪಡೆದ ಪ್ರಕರಣಗಳು ಕಂಡುಬಂದಲ್ಲಿ ಕಾರ್ಮಿಕರ ಸಂಘಟನೆಗಳು ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಅನರ್ಹರನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ. ಇಂತಹ ಪ್ರಕರಣಗಳು ಪತ್ತೆಯಾದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಹೇಳಿದರು.
ರಾಣೇಬೆನ್ನೂರು ನಗರದಲ್ಲಿ ಸೋಮವಾರ ರಾಜ್ಯ ವಿಮಾ ಚಿಕಿತ್ಸಾಲಯ (ಇ.ಎಸ್.ಐ.) ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 35 ಕಾರ್ಮಿಕರ ಮಕ್ಕಳಿಗೆ ₹35 ಲಕ್ಷ ವೆಚ್ಚದಲ್ಲಿ ಪೈಲೆಟ್ ತರಬೇತಿ ನೀಡಲಾಗುವುದು ಎಂದರು.
ಇಡೀ ದೇಶದಲ್ಲೇ ರಾಜ್ಯದ ಕಾರ್ಮಿಕ ಇಲಾಖೆ ಕ್ರಾಂತಿಕಾರಿ ಬದಲಾವಣೆ ತಂದಿದೆ. ಎರಡು ವರ್ಷಗಳಲ್ಲಿ ರಾಜ್ಯದ ಕಾರ್ಮಿಕರ ಮಕ್ಕಳಿಗೆ ₹845 ಕೋಟಿ ವಿದ್ಯಾರ್ಥಿವೇತನ ಪಾವತಿಸಲಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 500 ಕಾರ್ಮಿಕರ ಮಕ್ಕಳನ್ನು ಕೆ.ಎ.ಎಸ್. ಹಾಗೂ 250 ಕಾರ್ಮಿಕರ ಮಕ್ಕಳನ್ನು ಐ.ಎ.ಎಸ್. ತರಬೇತಿಗೆ ನಿಯೋಜಿಸಲಾಗಿದೆ. ತರಬೇತಿ ಸಮಯದಲ್ಲಿ ₹6 ಸಾವಿರ ಸ್ಟೈಫಂಡ್ ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.