ADVERTISEMENT

ಅಸ್ಪೃಶ್ಯತೆ ಇರುವವರೆಗೆ ಮೀಸಲಾತಿ ಬೇಕು: ಸಚಿವ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 11:55 IST
Last Updated 16 ಫೆಬ್ರುವರಿ 2020, 11:55 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿತ್ರದುರ್ಗ: ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇರುವವರೆಗೂ ಮೀಸಲಾತಿ ನೀಡುವ ಅಗತ್ಯವಿದೆ. ಅಸ್ಪೃಶ್ಯತೆಯ ಶಾಪ ಅನುಭವಿಸಿದರ ಏಳಿಗೆಗೆ ಮೀಸಲಾತಿ ನೆರವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಸಹಾಯಕರ ಹೆಸರಿನಲ್ಲಿ ಬಲಶಾಲಿಗಳು ಅನುಭವಿಸಲು ಮೀಸಲಾತಿ ಸೌಲಭ್ಯ ಕಲ್ಪಿಸಿಲ್ಲ. ತುಳಿತಕ್ಕೆ ಒಳಗಾದವರಿಗೆ ಈ ಸೌಲಭ್ಯ ಮೀಸಲು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ಪರವಿದೆ. ವಿನಾ ಕಾರಣ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ’ ಎಂದು ಕಿಡಿಕಾರಿದರು.

‘ಶಾಸಕ ಹ್ಯಾರಿಸ್‌ ಪುತ್ರ ಅಪಘಾತ ನಡೆಸಿ ಸಾಕ್ಷ್ಯ ಸಹಿತ ಸಿಕ್ಕಿಬಿದ್ದಿದ್ದಾರೆ. ಸಚಿವ ಆರ್‌.ಅಶೋಕ್‌ ಪುತ್ರನ ಮೇಲೆ ಸಂಶಯ ಮಾತ್ರ ಇದೆ. ಸಚಿವರ ಪುತ್ರನೇ ಅಪಘಾತ ನಡೆಸಿದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಗಳಿದ್ದರೆ ಪೊಲೀಸರು ಅಥವಾ ನ್ಯಾಯಾಲಯಕ್ಕೆ ಒಪ್ಪಿಸಲಿ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿ ಅನುದಾನ ಹಂಚಿಕೆ ಸರಿಯಾಗಿ ನಡೆದಿತ್ತಾ ಎಂಬುದನ್ನು ಜೆಡಿಎಸ್‌ ಪ್ರಶ್ನಿಸಿಕೊಳ್ಳಲಿ. ಒಂದೆಡೆ ಸಿಕ್ಕಾಪಟ್ಟೆ ಅನುದಾನ ನೀಡಿ, ಮತ್ತೊಂದಡೆ ಏನು ಕೊಟ್ಟಿಲ್ಲ. ಈ ಅಸಮತೋಲನ ಸರಿಪಡಿಸಲು ಅನುದಾನ ಮರುಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ 30 ಜಿಲ್ಲೆಗಳಿವೆ, ಮೂರು ಜಿಲ್ಲೆ ಸೇರಿ ರಾಜ್ಯವಾಗಲು ಸಾಧ್ಯವಿಲ್ಲ’ ಎಂದು ಅನುದಾನ ಹಂಚಿಕೆಗೆ ಸಂಬಂಧಿಸಿದ ದೇವೇಗೌಡರ ಆರೋಪಕ್ಕೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.