ADVERTISEMENT

ಸೈಕಲ್‌ ಯಾನ; ವಿಶ್ವಶಾಂತಿ ಮಂತ್ರ

ಶ್ರೀಧರ ಗೌಡರ
Published 14 ಜುಲೈ 2019, 19:45 IST
Last Updated 14 ಜುಲೈ 2019, 19:45 IST
 ಸೈಕಲ್ ಯಾತ್ರೆ ಕೈಗೊಂಡ ನಾಗರಾಜಗೌಡ
 ಸೈಕಲ್ ಯಾತ್ರೆ ಕೈಗೊಂಡ ನಾಗರಾಜಗೌಡ   

ಕೂಡಲಸಂಗಮ : ವಿಶ್ವಶಾಂತಿ, ಗೋರಕ್ಷಣೆ, ರಾಷ್ಟ್ರೀಯ ಐಕ್ಯತೆ, ಜೀವ ಜಲದ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಳೆದ 3 ವರ್ಷಗಳಿಂದ 12 ರಾಜ್ಯದಲ್ಲಿ 3 ಸಾವಿರ ಕಿ.ಮೀ ದೂರವನ್ನು ಹಾಸನದ ನಾಗರಾಜಗೌಡ ಕ್ರಮಿಸಿದ್ದಾರೆ. ಭಾನುವಾರ ಸೈಕಲ್ ಯಾತ್ರೆ ಹಾದಿಯಲ್ಲಿ ಕೂಡಲಸಂಗಮಕ್ಕೂ ಬಂದಿದ್ದರು.

ನಾಗರಾಜಗೌಡರಿಗೆ 65 ವರ್ಷ ವಯಸ್ಸು. 2017 ಡಿಸೆಂಬರ್ 3 ರಂದು ಮುಂಬೈನಿಂದ ಭಾರತ ಯಾತ್ರೆ ಹೆಸರಿನಲ್ಲಿ ಸೈಕಲ್ ಯಾನ ಆರಂಭಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮೂಲಕ ಕರ್ನಾಟಕ ಪ್ರವೇಶಿಸಿ ಬೀದರ್, ಕಲಬುರ್ಗಿ, ವಿಜಯಪುರ ಮೂಲಕ ಕೂಡಲಸಂಗಮಕ್ಕೆ ಬಂದಿದ್ದರು.

ಸಂಗಮದ ದೇವಾಲಯದ ಆವರಣ, ಬಸ್ ನಿಲ್ದಾಣದಲ್ಲಿ ಓಡಾಡಿ, ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಿದರು.

ADVERTISEMENT

‘ನಿತ್ಯ 80 ರಿಂದ 100 ಕಿ.ಮೀ ಕ್ರಮಿಸುತ್ತೇನೆ. ರಾತ್ರಿ ರಸ್ತೆಯ ಬದಿಯಲ್ಲಿಯ ಮಂದಿರ, ಮಸೀದಿ, ಆಶ್ರಮದಲ್ಲಿ ವಾಸ್ತವ್ಯ ಹೂಡುತ್ತೇನೆ. ಮಾರ್ಗ ಮಾಧ್ಯದಲ್ಲಿ ಡಾಬಾ, ಹೋಟಲ್‌ನವರು ಕರೆದು ಉಚಿತವಾಗಿ ಊಟ ಕೊಡುತ್ತಾರೆ. ಕೆಲವು ಸಂಘ ಸಂಸ್ಥೆಯವರು ₹100 ರಿಂದ ₹200 ಕೊಟ್ಟು ಸಹಾಯ ಮಾಡುತ್ತಾರೆ.ನಿತ್ಯದ ಖರ್ಚಿಗೆ ಇದೇ ಹಣ ಸಾಲುತ್ತದೆ. ಹಂಪಿ, ಬಳ್ಳಾರಿ ಮೂಲಕ ಆಂದ್ರಪ್ರದೇಶಕ್ಕೆ ತೆರಳಿ ಬೆಂಗಳೂರಿಗೆ ಮರಳುತ್ತೇನೆ. ಮುಂದಿನ ಎರಡು ತಿಂಗಳು ಅಧಿಕ ಮಳೆ ಇರುವುದರಿಂದ ವಿಶ್ರಾಂತಿ ಪಡೆದು ಮತ್ತೆ ಯಾತ್ರೆ ಆರಂಭಿಸಿ ತಮಿಳುನಾಡು, ಕೇರಳದ ಮೂಲಕ ಮುಂಬೈ ತಲುಪಿ ಡಿಸೆಂಬರ್ 3, 2020ಕ್ಕೆ ಭಾರತಯಾತ್ರೆ ಮುಕ್ತಾಯಗೊಳಿಸುತ್ತೇನೆ‘ ಎಂದು ಹೇಳುತ್ತಾರೆ.

ನಾವೆಲ್ಲರೂ ಒಂದೇ, ವಿಶ್ವಶಾಂತಿ ಎಂಬ ಬರಹದೊಂದಿಗೆ ಎಲ್ಲ ಧರ್ಮದ ಚಿಹ್ನೆಗಳನ್ನು ಹೊಂದಿದ ಫಲಕ ಸೈಕಲ್ ಮುಂಭಾಗದಲ್ಲಿದೆ. ಸೈಕಲ್‌ಗೆ ಕನ್ನಡ ಬಾವುಟ, ರಾಷ್ಟ್ರಧ್ವಜ ಕಟ್ಟಿದ್ದಾರೆ. ಬೆಡ್‌ಶೀಟ್, ಜರ್ಕಿನ್, ಟವೆಲ್ ಮುತಾಂದ ಅಗತ್ಯ ವಸ್ತುಗಳನ್ನು ಸೈಕಲ್ ಹಿಂಬದಿಯ ಕಟ್ಟಿದ್ದಾರೆ. ಸೈಕಲ್ ಚಕ್ರಗಳಿಗೆ ಹವಾ ತುಂಬಿಸಲು ಪಂಪ್ ಕೂಡ ಜೊತೆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.