ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ತಿಂಗಳಿನಿಂದ ಅರಮನೆ ಆವರಣದಲ್ಲಿ ತಂಗಿದ್ದ 8 ಆನೆಗಳು ಭಾನುವಾರ ಶಿಬಿರಗಳಿಗೆ ಮರಳಿದವು. ಅರಣ್ಯ ಇಲಾಖೆ ಅಧಿಕಾರಿಗಳು, ಅರಮನೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾರವಾದ ಮನಸ್ಸಿನಿಂದ ಗಜಪಡೆಗೆ ಬೀಳ್ಕೊಟ್ಟರು. ವಿಶೇಷ ಪೂಜೆ ಸಲ್ಲಿಸಿ, ಹಣ್ಣು, ಕಬ್ಬು, ಬೆಲ್ಲ ತಿನ್ನಿಸಿದರು.
ಮೊದಲ ಬಾರಿ ದಸರೆಯಲ್ಲಿ ಪಾಲ್ಗೊಂಡಿದ್ದ ಅಶ್ವತ್ಥಾಮ ಆನೆಯು ‘ಕಾಡಿಗೆ ಹೋಗಲಾರೆ’ ಎಂದು ಹಟ ಹಿಡಿಯಿತು. ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಧನಂಜಯ ಆನೆಗಳು ಲಾರಿಯತ್ತ ತಳ್ಳಿದರೂ ಮುಂದೆ ಹೆಜ್ಜೆ ಇಡಲು ಒಪ್ಪಲಿಲ್ಲ. ಲಾರಿ ಏರಲೆಂದು ನಿರ್ಮಿಸಿದ್ದ ಮಣ್ಣಿನ ದಿಬ್ಬದಿಂದಲೇ ಕೆಳಗೆ ಇಳಿಯುವ ಪ್ರಯತ್ನ ಮಾಡಿತು. ಕೊನೆಗೆ, ಅರಣ್ಯ ಇಲಾಖೆಯ ವಿಶೇಷ ವಾಹನ ತರಿಸಲಾಯಿತು. ಹಿಂದಿನಿಂದ ಅಭಿಮನ್ಯು ತನ್ನ ದಂತಗಳಿಂದ ತಿವಿದು ವಾಹನ ಹತ್ತಿಸಿತು. ಲಕ್ಷ್ಮಿ ಆನೆ ಕೂಡ ಹಟ ಹಿಡಿಯಿತಾದರೂ, ಇತರೆ ಆನೆಗಳ ಸಹಾಯದಿಂದ ಲಾರಿ ಹತ್ತಿಸಲಾಯಿತು.
ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರು ತಮ್ಮ ಪೆಟ್ಟಿಗೆ ಕಟ್ಟಿಕೊಂಡು ಲಾರಿಯಲ್ಲಿ ಕುಳಿತು ಎಲ್ಲರತ್ತ ಕೈಬೀಸಿದರು. ಅವರಿಗೆ ನೂರಾರು ಮಂದಿ ಕರತಾಡನದ ಮೂಲಕ ಶುಭ ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.