
ನವದೆಹಲಿ: ಕರ್ನಾಟಕದ ಕಬ್ಬು, ಜೋಳ ಮತ್ತು ತೊಗರಿಬೇಳೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್ ಸಂಸದರ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿತು.
‘ನಮ್ಮ ರೈತರು ಗಂಭೀರ ಸಂಕಷ್ಟದಲ್ಲಿದ್ದಾರೆ, ಕಬ್ಬಿನ ನ್ಯಾಯಸಮ್ಮತ, ಲಾಭದಾಯಕ ದರವನ್ನು (ಎಫ್ಆರ್ಪಿ) 2019ರಿಂದ ಪರಿಷ್ಕರಿಸಿಲ್ಲ. ಇದೇ ವೇಳೆ ಸಕ್ಕರೆ ಉತ್ಪಾದನಾ ವೆಚ್ಚವು ಪ್ರತಿವರ್ಷವೂ ಏರಿಕೆಯಾಗುತ್ತಿದ್ದು, ಬೆಲೆಯ ಅಂತರ ಹೆಚ್ಚಾಗಿ ಕಾರ್ಖಾನೆಗಳು ಹಾಗೂ ರೈತರು ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ’ ಎಂದು ನಿಯೋಗವು ಸಚಿವರ ಗಮನ ಸೆಳೆಯಿತು.
‘ಜೋಳದ ಮಾರುಕಟ್ಟೆ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂಎಸ್ಪಿ) ಬಹಳ ಕಡಿಮೆ ಇದ್ದು, ರೈತರಿಗೆ ತಮ್ಮ ಉತ್ಪನ್ನವನ್ನು ಮಾರಲು ಆಗುತ್ತಿಲ್ಲ. ತೊಗರಿಬೇಳೆಯ ಮಾರುಕಟ್ಟೆ ಬೆಲೆ ಎಂಎಸ್ಪಿಗಿಂತಲೂ ಕಡಿಮೆ ಇದೆ. ಇದರಿಂದ ಉತ್ತರ ಕರ್ನಾಟಕದ ಬೆಳೆಗಾರರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ವೈಜ್ಞಾನಿಕ ಬೆಲೆ ಕೊಡಿಸಬೇಕು’ ಎಂದು ಒತ್ತಾಯಿಸಿತು.
ಸಂಸದರಾದ ಜಿ.ಕುಮಾರ ನಾಯಕ, ಇ.ತುಕಾರಾಂ, ಡಾ. ಪ್ರಭಾ ಮಲ್ಲಿಕಾರ್ಜುನ್, ಸುನೀಲ್ ಬೋಸ್, ಸಾಗರ್ ಖಂಡ್ರೆ, ಶ್ರೇಯಸ್ ಪಟೇಲ್ ನಿಯೋಗದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.